ಸಿಂಧನೂರು: ನಗರದ ಉಪ್ಪಾರವಾಡಿ, ಮಂಡಾಳಭಟ್ಟಿ ಏರಿಯಾ, ಜನತಾಕಾಲೊನಿ ಮುಂತಾದ ಬಡಾವಣೆಗಳಲ್ಲಿ ದುರ್ನಾತ ಬೀರುವ ಅಶುದ್ಧ ನೀರು ಪೂರೈಕೆಯಾಗುತ್ತಿದ್ದು, ಜನರ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಬಹುತೇಕ ಮಂದಿ ಡೆಂಗಿ ಮತ್ತು ಇನ್ನಿತರ ಅನಾರೋಗ್ಯ ಸಮಸ್ಯೆಗೆ ಒಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶುದ್ಧ ನೀರು ಪೂರೈಸುವಂತೆ ವಿವಿಧ ಬಡಾವಣೆಗಳ ನಿವಾಸಿಗಳು ಅಲ್ಲದೇ ಸಂಘಟನೆಗಳು ನಗರಸಭೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಒತ್ತಡ ಹೇರಲು ಪ್ರತಿಭಟನೆಯೂ ನಡೆಸಿದ್ದಾರೆ. ಎಷ್ಟೆಲ್ಲ ಹೋರಾಟ ನಡೆಸಿದರೂ ನಗರಸಭೆಯಿಂದ ಸಕಾರಾತ್ಮಕ ಸ್ಪಂದನೆ ಸಿಗುತ್ತಿಲ್ಲ ಎಂದು ಸಂಘಟನೆಗಳ ಮುಖಂಡರು ಬೇಸರ ವ್ಯಕ್ತಪಡಿಸುತ್ತಾರೆ.
‘ಅಶುದ್ಧ ನೀರನ್ನು ಸೇವಿಸಲು ಹಿಂದೇಟು ಹಾಕುತ್ತಿರುವ ಕೆಲವರು ಕ್ಯಾನ್ಗಳಲ್ಲಿ ಪೂರೈಕೆಯಾಗುವ ನೀರಿಗೆ ಮೊರೆ ಹೋಗಿದ್ದಾರೆ. ಇನ್ನೂ ಕೆಲವರು ಅನಿವಾರ್ಯವಾಗಿ ಮಲಿನ ನೀರನ್ನೇ ಸೇವಿಸುತ್ತಾರೆ. ಅಶುದ್ಧ ನೀರು ಸೇವಿಸಿ, ಆರೋಗ್ಯಯುತವಾಗಿ ಬದುಕು ವುದಾದರೂ ಹೇಗೆ’ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಸರಸ್ವತಿ ಪಾಟೀಲ ಪ್ರಶ್ನಿಸುತ್ತಾರೆ.
‘ನೀರಿನ ಸಮಸ್ಯೆಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಶುದ್ಧ ನೀರು ಪೂರೈಕೆಗೆ ಅಗತ್ಯ ಕ್ರಮ ಜರುಗಿಸಬೇಕು’ ಎಂದು ನಗರಾಭಿವೃದ್ಧಿ ಹೋರಾಟ ಸಮಿತಿ ಸಂಚಾಲಕ ವೀರಭದ್ರಪ್ಪ ಕುರಕುಂದಿ, ಚಂದ್ರಶೇಖರ ಗೊರಬಾಳ, ಡಿ.ಎಚ್.ಪೂಜಾರ್ ಮತ್ತು ಡಾ.ತಾಹೇರ್ ಅಲಿ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.