ADVERTISEMENT

ಸಮಸ್ಯೆ ಎಂದವರಿಗೆ ಭರವಸೆಯ ತುಪ್ಪ!

ಸಿಂಧನೂರು ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ: ಆಟಕ್ಕುಂಟು ಲೆಕ್ಕಕ್ಕಿಲ್ಲ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2017, 7:44 IST
Last Updated 2 ಫೆಬ್ರುವರಿ 2017, 7:44 IST
ಸಮಸ್ಯೆ ಎಂದವರಿಗೆ ಭರವಸೆಯ ತುಪ್ಪ!
ಸಮಸ್ಯೆ ಎಂದವರಿಗೆ ಭರವಸೆಯ ತುಪ್ಪ!   
ಸಿಂಧನೂರು: ‘ನಮ್ಮೂರಲ್ಲಿ ಸಮಸ್ಯೆ ಯಿದೆ’ ಎಂದು ಧ್ವನಿಯೆತ್ತಿದ ಸದಸ್ಯರ ಮೂಗಿಗೆ ಕಾರ್ಯನಿರ್ವಾಹಕ ಅಧಿಕಾರಿ ಜಿ.ಎಂ. ಬಸಣ್ಣ ಭರವಸೆ ತುಪ್ಪ ಸವರಿ ಸುಮ್ಮನಾಗಿಸಿದ ಪ್ರಸಂಗ ಬುಧವಾರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ನಾಲ್ಕನೇ ಸಾಮಾನ್ಯ ಸಭೆಯಲ್ಲಿ ನಡೆಯಿತು.
 
ಪ್ರಾರಂಭದಲ್ಲಿ ಗುಡುದೂರು ತಾಲ್ಲೂಕು ಪಂಚಾಯಿತಿ ಸದಸ್ಯ ಈಶಪ್ಪ ದೇಸಾಯಿ ಮಾತನಾಡಿ, ರಾಷ್ಟ್ರೀಯ ಆಚರಣೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಕೆಲ ಅಧಿಕಾರಿಗಳು ಪಾಲ್ಗೊಳ್ಳುತ್ತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ಎಂದರು. 
 
ತಮ್ಮ ಕ್ಷೇತ್ರದಲ್ಲಿ ವಿದ್ಯುತ್ ಕಂಬಗಳ ತಂತಿಗಳು ಕೆಳಗೆ ಜೋತು ಬಿದ್ದಿವೆ. ಇದು ಜೆಸ್ಕಾಂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
 
ಇದಕ್ಕೆ ಪ್ರತಿಕ್ರಿಯಿಸಿದ ಇಒ ಬಸಣ್ಣ ವಿದ್ಯುತ್ ತಂತಿಗಳ ಸಮರ್ಪಕ ಜೋಡ ಣೆಗೆ ಜೆಸ್ಕಾಂ ಅಧಿಕಾರಿಗೆ ಸೂಚಿಸಿದರು. 
 
ವಿರುಪಾಪುರ ಸದಸ್ಯ ನಿಂಗಪ್ಪ ಮಾತನಾಡಿ, ಸಭೆಯಲ್ಲಿ ಚರ್ಚಿಸಿದ ವಿಷಯಗಳು ಅನುಷ್ಠಾನಗೊಳ್ಳುತ್ತಿಲ್ಲ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ಸಮಸ್ಯೆಗಳಿಗೆ ಸಕರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಸಭೆಯಲ್ಲಿ ಮಾತ್ರ ತಲೆ ಹಾಕುತ್ತಾರೆ. ಆದರೆ, ಪಂಚಾಯಿತಿಯಲ್ಲಿ ಹುಡುಕಾಡಿದರೂ ಪಿಡಿಒಗಳು ಸಿಗುವುದಿಲ್ಲ ಎಂದು ಆಪಾದಿಸಿದರು. ಇದಕ್ಕೆ ಸದಸ್ಯರಾದ ಉದಯಗೌಡ, ಹನುಮೇಶ ಸಾಲ­ಗುಂದಾ, ಶರಣಮ್ಮ ದನಿಗೂಡಿಸಿದರು. 
 
ಅರಳಹಳ್ಳಿ ಸರ್ಕಾರಿ ಶಾಲೆಯ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಿಲ್ಲ. ತಾಲ್ಲೂಕಿನ ಎಲ್ಲ ಕಡೆ ಹಣ ನೀಡಲಾಗಿದೆ ಎನ್ನುವುದಾರೆ ಇಲ್ಲಿ ಯಾಕೆ ಬಂದಿಲ್ಲ ಎಂದು ನಿಂಗಪ್ಪ ಪ್ರಶ್ನಿಸಿದರು. ಆಗ ಹಾಸ್ಟೆಲ್ ಮೇಲ್ವಿಚಾರಕ ರಮೇಶ ಅನುದಾನದ ಕೊರತೆಯಿಂದ ವಿಳಂಬ ವಾಗಿದೆ. ಆ ಶಾಲೆಯ ಮುಖ್ಯಶಿಕ್ಷಕರು ಪುನಃ ಅರ್ಜಿ ಸಲ್ಲಿಸಿದರೆ ಪರಿಶೀಲಿಸಿ ಶಿಷ್ಯವೇತನ ವಿತರಣೆಗೆ ಕ್ರಮಕೈಗೊಳ್ಳಲಾ ಗುವುದು ಎಂದು ಭರವಸೆ ನೀಡಿದರು.
 
ಚೆನ್ನಳ್ಳಿ ಶಾಲಾ ಕಟ್ಟಡದ ನಿರ್ಮಾಣ, ಕಲಮಂಗಿ, ಅಮರಾಪುರ, ತಿಡಿಗೋಳ ಶಾಲಾ ಕಂಪೌಂಡ್ ನಿರ್ಮಾಣ, ರಂಗಾಪುರ ಗ್ರಾಮದಲ್ಲಿ ಶಿಥಿಲಗೊಂಡಿ ರುವ ಶಾಲಾ ಕಟ್ಟಡ ದುರಸ್ತಿ ಮಾಡು ವಂತೆ ಹಲವಾರು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಲಾಗಿದ್ದು, ಇದುವರೆಗೂ ಯಾವುದೇ ಪ್ರಯೋಜನ ವಾಗಿಲ್ಲ ಎಂದು ಸದಸ್ಯರಾದ ಶರಣಮ್ಮ, ರಾಮಮ್ಮ ರಾಮಪ್ಪ, ನಾಗರತ್ನ ಚಂದ್ರ ಶೇಖರ, ಶೇಖರಪ್ಪ ಆಪಾದಿಸಿದರು.
 
ಆಶ್ರಯ ಯೋಜನೆಯಲ್ಲಿ ಮನೆಗಳನ್ನು ಕಟ್ಟಿಸಿಕೊಂಡು ಆರು ಜನರಿಗೆ ಇದು ವರೆಗೂ ಬಿಲ್ ಪಾವತಿ ಮಾಡಿಲ್ಲ ಎಂದು ಸದಸ್ಯೆ ಶರಣಮ್ಮ ಸಭೆಯ ಗಮನ ಸೆಳೆದರು. ಆಗ ಇಒ ಬಸಣ್ಣ ಗ್ರಾಮಗಳಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಹಾಗೂ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಜನಪ್ರತಿನಿಧಿಗಳೊಂದಿಗೆ ಅಧಿಕಾರಿ ಮತ್ತು ಸಾರ್ವಜನಿಕರ ಸಹಕಾರ ಅವಶ್ಯ­ವಾಗಿದೆ. ಒಟ್ಟಿನಲ್ಲಿ ಪ್ರಾಮಾಣಿಕತೆಯಿಂದ ಗ್ರಾಮಗಳ ಅಭಿವೃದ್ಧಿ ಮುಂದಾಗಬೇಕು ಎಂದು ಸೂಚಿಸಿದರು.
 
13ನೇ ಹಣಕಾಸು ಯೋಜನೆ ಹಾಗೂ ತಾಲ್ಲೂಕು ಪಂಚಾಯಿತಿ ಸಂಗ್ರ ಹಿತ ನಿಧಿ, ಬ್ಯಾಂಕ್ ಬಡ್ಡಿ ಸೇರಿ ಒಟ್ಟು ₹30 ಲಕ್ಷ ಅನುದಾನವಿದ್ದು, ಯಾವುದಾ ದರೂ ಕಾಮಗಾರಿ ಕೈಗೊಳ್ಳಲು ಅನುಮತಿ ನೀಡುವಂತೆ ಜಿಲ್ಲಾ ಪಂಚಾ ಯಿತಿಗೆ ಪ್ರಸ್ತಾವನೆ ಸಲ್ಲಿಸಲು ಸಭೆ ಸಮ್ಮತಿ ನೀಡಿತು. ತಾ.ಪಂ ಅಧ್ಯಕ್ಷೆ ಬಸಮ್ಮ ಬಸನಗೌಡ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಅನುಷಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.