ರಾಯಚೂರು: 'ಬಂಡವಾಳ ಶಾಹಿಗಳ ಹಿಡಿತಕ್ಕೆ ಸಿಲುಕಿರುವ ಸರ್ಕಾರಗಳು ಖಾಸಗಿ ಕಂಪೆನಿಗಳ ಪರವಾಗಿ ಆಡಳಿತ ನಡೆಸುತ್ತಿದ್ದು, ಎಲ್ಲ ಪಕ್ಷಗಳ ಮುಖವಾಡ ಒಂದೆಯಾಗಿದೆ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ' ಎಂದು ಪತ್ರಕರ್ತ ಶಿವಸುಂದರ ಹೇಳಿದರು.
ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜನ ಸಂಗ್ರಾಮ ಪರಿಷತ್ನಿಂದ ಈಚೆಗೆ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ವಿಶ್ವ ಹಣಕಾಸು ಬಂಡವಾಳ ಮತ್ತು ಭಾರತ ಸರ್ಕಾರದ ಆರ್ಥಿಕ ನೀತಿ ಕುರಿತು ಮಾತನಾಡಿದರು.
‘ಸರ್ಕಾರಗಳ ಆರ್ಥಿಕ ನೀತಿಯೂ ಬಂಡವಾಳ ಶಾಹಿಗಳ ಪರವಾಗಿದ್ದರಿಂದ ದೇಶದ ಬಹುಸಂಖ್ಯಾತ ಜನರು ಸಂಕಷ್ಟ ಎದುರಿಸುವಂತಾಗಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸರಕು ಸೇವಾ ತೆರಿಗೆ (ಜಿಎಸ್ಟಿ) ರೈತರಿಗೆ ಹಾಗೂ ಸಣ್ಣ ವ್ಯಾಪಾರಿಗಳಿಗೆ ನಷ್ಷವನ್ನುಂಟು ಮಾಡಿದೆ’ ಎಂದು ದೂರಿದರು.
‘ಜಾಗತೀಕರಣದ ಪರಿಣಾಮದಿಂದ ಜಗತ್ತಿನ 500 ಕಂಪೆನಿಗಳ ಆದಾಯದಲ್ಲಿ ಭಾರೀ ಪ್ರಮಾಣದ ಏರಿಕೆ ಕಂಡುಬಂದಿದೆ. ಈ ಕಂಪೆನಿಗಳ ಮಾರ್ಗದಶರ್ನದಂತೆ ಸರ್ಕಾರಗಳ ಆರ್ಥಿಕ ನೀತಿಗಳು ರೂಪುಗೊಳ್ಳುತ್ತಿವೆ. ಆರ್ಥಿಕ ನೀತಿಗಳು ಬಂಡವಾಳ ಶಾಹಿಗಳ ಹಿಡಿತಕ್ಕೆ ಸಿಲುಕಿದಾಗಿನಿಂದ ಹಗರಣಗಳು ಹೆಚ್ಚುತ್ತಿವೆ.
ಆದರೆ, ದೇಶದಲ್ಲಿನ ಮಾಧ್ಯಮಗಳು ಉದ್ಯಮಿಗಳ ಕೈಯಲ್ಲಿ ಸಿಲುಕಿರುವುದರಿಂದ ಕೆಟ್ಟ ಆರ್ಥಿಕ ನೀತಿಗಳನ್ನು ಅಭವೃದ್ಧಿಯ ಸಂಕೇತಗಳು ಎಂಬಂತೆ ಬಿಂಬಿಸಲಾಗುತ್ತಿದೆ’ ಎಂದು ದೂರಿದರು. ಮುಖಂಡರಾದ ಎಸ್.ಆರ್.ಹಿರೇಮಠ, ರಾಘವೇಂದ್ರ ಕುಷ್ಟಗಿ ಇದ್ದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.