ADVERTISEMENT

ಸಿ.ಎಂ ನಿಧಿಯಿಂದ ₹ 10 ಕೋಟಿ ವಿಶೇಷ ಅನುದಾನ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2017, 6:42 IST
Last Updated 4 ಸೆಪ್ಟೆಂಬರ್ 2017, 6:42 IST

ಮಸ್ಕಿ: ಪುರಸಭೆಯ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪೈಪ್‌ ಬದಲಾವಣೆ ಸೇರಿದಂತೆ ವಿವಿಧ ಕಾಮಗಾರಿ ಕೆಲಸಗಳಿಗೆ ಮುಖ್ಯಮಂತ್ರಿಗಳ ವಿಶೇಷ ನಿಧಿಯಿಂದ ₹ 10 ಕೋಟಿ ಅನುದಾನ ನೀಡಲು ಮುಖ್ಯಮಂತ್ರಿಗಳು ಸಮ್ಮತಿ ಸೂಚಿಸಿದ್ದಾರೆ ಎಂದು ಶಾಸಕ ಪ್ರತಾಪಗೌಡ ಪಾಟೀಲ ಇಲ್ಲಿ ಹೇಳಿದರು.

ಪಟ್ಟಣದ ದೈವದಕಟ್ಟೆಯಿಂದ ಡಾ. ಖಲೀಲ ವೃತ್ತದ ವರೆಗಿನ ಚರಂಡಿ ಸೇರಿದಂತೆ ₹ 3 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.

ನಗರೋತ್ಥಾನ ಯೋಜನೆ ಅಡಿಯಲ್ಲಿ ಈಗಾಗಲೇ ₹ 10 ಕೋಟಿ ಬಿಡುಗಡೆಯಾಗಿದೆ. ಇದರಲ್ಲಿ ₹ 5 ಕೋಟಿ ಅನುದಾನವನ್ನು ಪಟ್ಟಣದ ಹಳೆಯದಾದ ಕುಡಿಯುವ ನೀರಿನ ಪೈಪ್‌ಲೈನ್‌ಗಳ ಬದಲಾವಣೆಗೆ ಬಳಸಿಕೊಳ್ಳಲಾಗುವುದು ಎಂದರು.

ADVERTISEMENT

ಎಲ್ಲಾ ಪೈಪ್‌ಗಳನ್ನು ಬದಲಾವಣೆ ಮಾಡಬೇಕಾದರೆ ₹ 13 ಕೋಟಿ ಅಂದಾಜು ವೆಚ್ಚವಾಗುತ್ತದೆ. ಇದಕ್ಕಾಗಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ₹ 10 ಕೋಟಿ ಹೆಚ್ಚುವರಿ ಅನುದಾನಕ್ಕೆ ಒಪ್ಪಿಗೆ ಪಡೆಯಲಾಗಿದೆ ಎಂದರು. ಪುರಸಭೆ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿ ಕೆಲಸಗಳು ಕಳಪೆಯಾಗಿ ನಡೆಯುತ್ತಿವೆ ಎಂಬ ದೂರುಗಳು ಬರುತ್ತಿವೆ.

ಪುರಸಭೆ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಗುತ್ತಿಗೆದಾರರಿಂದ ಗುಣಮಟ್ಟದ ಕಾಮಗಾರಿ ತೆಗೆದುಕೊಳ್ಳಬೇಕು ಎಂದರು. ಸಾರ್ವಜನಿಕರು ಸಹ ಕೆಲಸದ ಮೇಲೆ ನಿಗಾವಹಿಸಬೇಕು ಎಂದು ಮನವಿ ಮಾಡಿದರು.

ಜನವರಿ 1 ರಿಂದ ಹೊಸ ತಾಲ್ಲೂಕು ಕಚೇರಿಗಳು ಆರಂಭವಾಗಲಿವೆ. ಬೆಳೆಯುತ್ತಿರುವ ಪಟ್ಟಣದ ಅಭಿವೃದ್ಧಿಗೆ ಪುರಸಭೆ ಸದಸ್ಯರು ಹೆಚ್ಚಿನ ಸಹಕಾರ ನೀಡಬೇಕು. ಮಾದರಿ ಪುರಸಭೆ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಹಾದೇವಪ್ಪಗೌಡ ಪೊಲೀಸ್ ಪಾಟೀಲ ಮಾತನಾಡಿ, ಪುರಸಭೆ ಆಡಳಿತ ಮಂಡಳಿ ಜನರ ಆಶೋತ್ತರಗಳಿಗೆ ಸ್ಪಂದಿಸಬೇಕು, ಅಧಿಕಾರಿಗಳು ಸಿಬ್ಬಂದಿ ಮೇಲೆ ನಿಯಂತ್ರಣ ಸಾಧಿಸಿ ಕೆಲಸ ತೆಗೆದುಕೊಳ್ಳಬೇಕು. ಕುಡಿಯವ ನೀರು ನಿರ್ವಹಣೆ ಬಗ್ಗೆ ದೂರುಗಳಿದ್ದು ಅವುಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಪುರಸಭೆ ಅಧ್ಯಕ್ಷ ಮೌನೇಶ ಮುರಾರಿ ಮಾತನಾಡಿ, ಪಟ್ಟಣ ಬೆಳೆದಂತೆ ಸಮಸ್ಯೆಗಳು ಬೆಳೆಯತೊಡಗಿವೆ. ಶಾಸಕರ ಹಾಗೂ ಮುಖಂಡರ ಸಹಕಾರದಿಂದ ಉತ್ತಮ ಆಡಳಿತ ನೀಡಲಾಗುತ್ತಿದೆ. ಪಟ್ಟಣದಲ್ಲಿ ಕಳಪೆ ಕಾಮಗಾರಿ ಕಂಡು ಬಂದರೆ ಅಂತಹ ಗುತ್ತಿಗೆದಾರರ ಬಿಲ್‌ ತಡೆ ಹಿಡಿಯುವಂತೆ ಅಧಿಕಾರಿಗಳಿಗೆ ಆದೇಶ ನೀಡಲಾಗುವುದು ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಮಂಜುನಾಥ ಪಾಟೀಲ, ಪುರಸಭೆ ಉಪಾಧ್ಯಕ್ಷ ರವಿಕುಮಾರ ಪಾಟೀಲ ಮಾತನಾಡಿದರು.

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ರೇಣುಕಾ ಉಪ್ಪಾರ, ಎಪಿಎಂಸಿ ಉಪಾಧ್ಯಕ್ಷ ಬಸ್ಸಪ್ಪ ಬ್ಯಾಳಿ, ಅಂದಾನಪ್ಪ ಗುಂಡಳ್ಳಿ, ದೊಡ್ಡಪ್ಪ ಕಡಬೂರು, ಪುರಸಭೆಯ ವಿರೋಧ ಪಕ್ಷದ ನಾಯಕ ಸುರೇಶ ಹರಸೂರು, ಗುತ್ತಿಗೆದಾರ ಎಂ. ಪ್ರಭುದೇವ್‌, ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ, ಎಂಜಿನಿಯರ್‌ ಪಾಟೀಲ ಇತರರು ಇದ್ದರು. ವೀರೇಶ ಪಾಟೀಲ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.