ರಾಯಚೂರು: ಡಾ. ನಂಜುಂಡಪ್ಪ ವರದಿಯ ನೀಲನಕ್ಷೆಯ ಪ್ರಕಾರ ದೇವದುರ್ಗ ತಾಲ್ಲೂಕಿನ ಕೊನೆಯ ಭಾಗದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳನ್ನು ನೂತನ ಸಿರವಾರ ತಾಲ್ಲೂಕಿಗೆ ಸೇರ್ಪಡೆ ಮಾಡಬೇಕು ಎಂದು ತಾಲ್ಲೂಕು ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಮೂಲಕ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ನಾಗಲದಿನ್ನಿ, ತಿಪ್ಪಲದಿನ್ನಿ, ಹೆಗ್ಗಡದಿನ್ನಿ, ಯರಮರಸ್, ನೀಲಗಲ್ ಗ್ರಾಮಗಳು ದೇವದುರ್ಗ ತಾಲ್ಲೂಕು ಕೇಂದ್ರದಿಂದ ೪೦ ಕಿಲೋ ಮೀಟರ್ ದೂರದಲ್ಲಿವೆ. ಆದರೆ ಸಿರವಾರದಿಂದ ಗರಿಷ್ಠ ೮ ಕಿಲೋ ಮೀಟರ್ ವ್ಯಾಪ್ತಿಯಲ್ಲಿವೆ. ಅದೇ ರೀತಿ ಜಾಗೀರ್ ಜಾಡಲದಿನ್ನಿ, ಮಲ್ಲೇದೇವರಗುಡ್ಡ, ಕ್ಯಾದಿಗೇರಾ, ಆಡ್ಕೋಡ್ ಗ್ರಾಮ ಪಂಚಾಯಿತಿಗಳ ಗ್ರಾಮಗಳೆಲ್ಲವೂ ದೇವದುರ್ಗಕ್ಕಿಂತಲೂ ಸಿರವಾರಕ್ಕೆ ಹತ್ತಿರವಾಗಿವೆ ಎಂದು ಸಮಿತಿ ಅಧ್ಯಕ್ಷ ಜೆ. ದೇವರಾಜ ಪಾಟೀಲ ನೇತೃತ್ವದಲ್ಲಿ ಸಲ್ಲಿಸಿದ ಮನವಿಯಲ್ಲಿ ವಿವರಿಸಲಾಗಿದೆ.
ದೇವದುರ್ಗ ತಾಲ್ಲೂಕಿನ ಕೊನೆಯ ಗ್ರಾಮ ಪಂಚಾಯಿತಿ ಗ್ರಾಮಗಳ ಜನರು ವ್ಯಾಪಾರ, ವಾಣಿಜ್ಯ, ಉದ್ಯೋಗ, ಶಿಕ್ಷಣ, ಆಸ್ಪತ್ರೆ ಸೇರಿದಂತೆ ದಿನನಿತ್ಯದ ಕೆಲಸಗಳಿಗೆ ಸಿರವಾರಕ್ಕೆ ಬರುತ್ತಾರೆ. ಇದೀಗ ಈ ಗ್ರಾಮಗಳನ್ನು ಸಿರವಾರಕ್ಕೆ ಸೇರ್ಪಡೆ ಮಾಡುವುದರಿಂದ ಎಲ್ಲ ಕೆಲಸಗಳಂತೆ ಸರ್ಕಾರಿ ಕಚೇರಿಗಳಿಗೆ ಹೋಗಿ ಬರುವ ಕಾರ್ಯಗಳನ್ನು ಸುಲಭವಾಗಿ ಪಡೆಯುವುದಕ್ಕೆ ಜನರಿಗೆ ಸಾಧ್ಯವಾಗಲಿದೆ. ಈ ಬಗ್ಗೆ ಪರಿಶೀಲಿಸಿ ಕೂಡಲೇ ಕ್ರಮ ವಹಿಸಬೇಕು ಎಂದು ಕೇಳಿಕೊಳ್ಳಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.