ADVERTISEMENT

ಹರಾಜು ಪ್ರಕ್ರಿಯೆ ಕೈ ಬಿಡಲು ಒತ್ತಾಯ

ಹರಿಹರ ರಸ್ತೆಯ ವರ್ತಕರ ಪ್ರತಿಭಟನೆ, ಈಗಿನ ವರ್ತಕರನ್ನು ಮುಂದುವರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಜನವರಿ 2017, 9:07 IST
Last Updated 5 ಜನವರಿ 2017, 9:07 IST

ರಾಯಚೂರು: ನಗರದ ಹರಿಹರ ರಸ್ತೆಯಲ್ಲಿನ ನಗರಸಭೆ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ಕೈಬಿಟ್ಟು ಈಗಿರುವ ವರ್ತಕರನ್ನೆ ಮುಂದುವರಿಸಬೇಕು ಇಲ್ಲದಿದ್ದರೆ ಧರಣಿ ನಡೆಸಲಾಗುವುದು ಎಂದು ವ್ಯಾಪಾರಿಗಳು ಎಚ್ಚರಿಸಿದರು.

ಬುಧವಾರ ನಗರದ ಹರಿಹರ ರಸ್ತೆಯಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ವರ್ತಕರು, ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಹಲವು ವರ್ಷದಿಂದಲೂ ಹರಿಹರ ರಸ್ತೆಯಲ್ಲಿನ ನಗರಸಭೆ ವಾಣಿಜ್ಯ ಮಳಿಗೆಗಳಲ್ಲಿ ವ್ಯಾಪಾರ ಮಾಡುತ್ತಿದ್ದೇವೆ. ಆದರೆ, ಈಗ ಮಳಿಗೆಗಳ ಹರಾಜು ಪ್ರಕ್ರಿಯೆಗೆ ಮುಂದಾಗಿರುವುದು ಖಂಡನೀಯ ಎಂದು ದೂರಿದರು.

ನಗರದಲ್ಲಿ ಸಾಕಷ್ಟು ಮಳಿಗೆಗಳಿದ್ದರೂ ಹರಿಹರ ರಸ್ತೆಯಲ್ಲಿರುವ ನಗರಸಭೆಯ 40 ಮಳಿಗೆಗಳನ್ನು ಮಾತ್ರ ಏಕೆ ಹರಾಜು ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದರು. ಮಳಿಗೆಗಳ ಹರಾಜು ಮಾಡುವುದರಿಂದ ಈಗಿರುವ ವ್ಯಾಪಾರಿಗಳಿಗೆ ತೀವ್ರ ಸಮಸ್ಯೆ ಎದುರಾಗಲಿದೆ. ಇದರಿಂದ ವರ್ತಕರ ಕುಟುಂಬಗಳು ಬೀದಿ ಪಾಲಾಗಲಿವೆ. ಅಲ್ಲದೆ, ಮಳಿಗೆಗಳ ಬಾಡಿಗೆಯನ್ನು ಕಾಲಕಾಲಕ್ಕೆ ಪಾವತಿಸಲಾಗುತ್ತಿದೆ. 2010ರಲ್ಲಿ ಮಳಿಗೆ ಬಾಡಿಗೆಯಲ್ಲಿ ಶೇ 20ರಷ್ಟು ಹೆಚ್ಚಳ ಮಾಡಿ ಸೇವಾ ತೆರಿಗೆ ಪಾವತಿಸಲು ಸೂಚಿಸಿದಾಗಲೂ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ ಪಾವತಿಸಲಾಗಿದೆ ಎಂದರು.

ಪ್ರತಿಭಟನೆಯಲ್ಲಿ ವರ್ತಕರಾದ ಠಾಕೂರ್‍ಲಾಲ್, ಜವಾರಿಲಾಲ್, ಗೌಸ್ ಖಾನ್, ಬಷೀರ್ ಅಹ್ಮದ್, ಸಂಪತ ಕುಮಾರ, ಸೂಗೂರೆಡ್ಡಿ ಪಾಟೀಲ್, ವಿಜಯರಾಜ್, ಪವನಕುಮಾರ, ಅಶೋಕ ಕುಮಾರ, ಸುನೀಲ್, ಎಂ.ಡಿ.ಅಪ್ಸರ್, ರಾಜೇಶ ಕುಮಾರ, ರಾಘವೇಂದ್ರ, ನೂರ್ ಮಹ್ಮದ್, ಶಂಕರ, ಶಾಂತಿಲಾಲ್, ಮಹೇಂದ್ರ ಹಾಗೂ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.