ADVERTISEMENT

ಹುಲಿಕೆರೆ ಹೂಳೆತ್ತುವ ಕಾಮಗಾರಿ ಆರಂಭ

ಸಂಸದರ ಅನುದಾನದಲ್ಲಿ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 5:55 IST
Last Updated 14 ಮಾರ್ಚ್ 2017, 5:55 IST

ದೇವದುರ್ಗ: ತಾಲ್ಲೂಕಿನ ಅರಕೇರಾ ಗ್ರಾಮದ ಹೊರವಲಯದಲ್ಲಿನ ಹುಲಿಕೆರೆ ಹೂಳು ಎತ್ತುವ ಕಾಮಗಾರಿ ಸೋಮವಾರ ಆರಂಭವಾಯಿತು.
ಸಂಸದ ಬಿ.ವಿ.ನಾಯಕ ಅವರ ಸ್ವಗ್ರಾಮ ಅರಕೇರಾ ಸೇರಿದಂತೆ ಈ ಭಾಗದ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಜಾನುವಾರುಗಳಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆ ಎದುರಾಗಬಾರದು ಎಂಬ ಕಾರಣದಿಂದ ಸಂಸದರ ಅನುದಾನದಲ್ಲಿ ಹುಲಿಕೆರೆಯಲ್ಲಿನ ಹೂಳು ಎತ್ತುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

‘ಕಾಮಗಾರಿ ಮುಗಿದ ನಂತರ ನಾರಾಯಣಪುರ ಬಲದಂಡೆ ಕಾಲುವೆಯ ಮೂಲಕ ಕೆರೆಗೆ ನೀರು ಹರಿಸಲಾಗುವುದು. ಕೆರೆ ಭರ್ತಿಯಾದರೆ ಬೇಸಿಗೆಯಲ್ಲಿ ಜಾನುವಾರುಗಳಿಗೆ ನೀರಿನ ಕೊರತೆ ಇರುವುದಿಲ್ಲ’ ಎಂದು ಕೃಷ್ಣಾ ಭಾಗ್ಯಜಲ ನಿಗಮದ ಎಂಜಿನಿಯರ್‌ ರವಿಕುಮಾರ ತಿಳಿಸಿದರು.

‘ಮಾರ್ಚ್‌ ಕೊನೆಯ ವಾರದಲ್ಲಿ ಕಾಲುವೆಗೆ ನೀರು ಸ್ಥಗಿತಗೊಳಿಸುವುದರಿಂದ ಜಾನುವಾರುಗಳಿಗೆ ಕುಡಿಯಲು ನೀರಿನ ಸಮಸ್ಯೆ ಎದುರಾಗುವ ಸಂಭವ ಹೆಚ್ಚಾಗಿ ಕಂಡು ಬರುತ್ತಿದೆ. ಇದನ್ನು ಅರಿತು ಸಂಸದರು ಹುಲಿಕೆರೆಯಲ್ಲಿ ಹೂಳು ಎತ್ತುವ ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚಿಸಿದ್ದಾರೆ’ ಎಂದು ಅವರು ತಿಳಿಸಿದರು. ರಾಯಚೂರು ವಿಭಾಗಾಧಿಕಾರಿ ವೀರಮಲ್ಲಪ್ಪ, ತಹಶೀಲ್ದಾರ್‌ ಶಿವಶರಣಪ್ಪ ಕಟ್ಟೋಳಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.