ರಾಯಚೂರು: ಬಸವಣ್ಣನ ಸಮಕಾಲಿನವರಾದ ಸಿದ್ದರಾಮೇಶ್ವರರು ಬಡವರಿಗೆ ಮನೆ ಹಾಗೂ ದಾಸೋಹವನ್ನು ಮಾಡಿದ್ದಾರೆ. ಅವರು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿ ಸಾಮಾಜಿಕ ಸಮಾನತೆಗಾಗಿ ಶ್ರಮಿಸಿರುವ ಕರ್ಮಯೋಗಿ ಆಗಿದ್ದರು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಹೇಳಿದರು.
ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬುಧವಾರ ಏರ್ಪಡಿಸಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಸಿದ್ದರಾಮೇಶ್ವರರು 68 ಸಾವಿರ ವಚನಗಳನ್ನು ಬರೆದಿದ್ದಾರೆ ಎಂದು ಇತಿಹಾಸದಿಂದ ತಿಳಿದು ಬಂದಿದೆ. 1379 ವಚನಗಳು ನಮಗೆ ಲಭ್ಯವಿರುವುದನ್ನು ಎಂ.ಎಂ.ಕಲಬುರಗಿ ಅವರು ಬರೆದ ಪುಸ್ತಕದಲ್ಲಿ ಕಾಣುತ್ತೇವೆ’ ಎಂದರು.
ಸರ್ಕಾರಗಳು ಇಂಥ ಜಯಂತಿಗಳನ್ನು ಆಚರಿಸುವ ಉದ್ದೇಶ; ಹಿಂದುಳಿದವರು ಒಂದು ಕಡೆ ಸೇರಿ ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳಲು ಸಹಕಾರಿಯಾಗಿದೆ. ತಮ್ಮ ಮಕ್ಕಳಿಗೆ ವಿದ್ಯೆಯ ಮೇಲೆ ಹೆಚ್ಚು ಒತ್ತು ನೀಡಬೇಕು ಎಂದು ಹೇಳಿದರು.
ತುರುಕನಡೋಣಿ ಆಂಜಿನೇಯ ಅವರು ಉಪನ್ಯಾಸ ನೀಡಿ, ಪ್ರಪಂಚಕ್ಕೆ ಭಾರತ ಕೊಟ್ಟಿರುವ ಕೊಡುಗೆ ಅಪಾರ. ಈ ನಾಡಿನಲ್ಲಿ ಶಿಶರಣರು ದಾರ್ಶನಿಕರು ಅನೇಕ ಮಹಾತ್ಮರ ನಾಡಿನಲ್ಲಿ ಜನಿಸಿದ ಸಿದ್ದರಾಮೇಶ್ವರರು ಶ್ರೀಶೈಲ ಮಲ್ಲಿಕಾರ್ಜುನನ ಆರಾಧ್ಯ ಭಕ್ತರಾಗಿದ್ದರು ಅವರು ಭಕ್ತಿಗೆ ಮೆಚ್ಚಿದ ಶಿವನು ಪ್ರತ್ಯಕ್ಷನಾದನು ಎಂದರು.
‘ನಮ್ಮ ಮಂದಿಗೆ ವಿದ್ಯೆ ಆಗುವುದಿಲ್ಲ ಎಂದು ಹೇಳುವವರಿದ್ದಾರೆ. ದನಗಳಿಗೆ ಬರುತ್ತದೆಯೇ ? ಅಂಬೇಡ್ಕರ್, ವಾಲ್ಮೀಕಿ, ವ್ಯಾಸ ಮಹರ್ಷಿ ಕೀಳು ಜನಾಂಗದಲ್ಲಿ ಜನಿಸಿ ಸಾಧನೆ ಮಾಡಿಲ್ಲವೆ’ ಎಂದು ಪ್ರಶ್ನಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಭಿರಾಂ ಜಿ.ಶಂಕರ, ಐಎಎಸ್ ಪ್ರೊಬೆಷನರಿ ಅಧಿಕಾರಿ ದರ್ಶನ, ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ನಾರಾಯಣಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಬಿ.ನೀಲಮ್ಮ, ನಗರಸಭೆ ಸದಸ್ಯ ಮಹಾಲಿಂಗಪ್ಪ, ಯುವ ಘಟಕದ ಅಧ್ಯಕ್ಷ ರಮೇಶ ಗಾಣದಾಳ ಹಾಗೂ ಭೋವಿ ಸಮಾಜದ ಭಾಂದವರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.