ADVERTISEMENT

ಶಿಕ್ಷೆಯಾಗದಿರುವುದು ಬೇಸರದ ಸಂಗತಿ

ಮಕ್ಕಳ ಸಹಾಯವಾಣಿ ತಂಡಗಳ ಸಿಬ್ಬಂದಿಗೆ ತರಬೇತಿ: ಎಎಸ್‌ಪಿ ಎಸ್‌.ಬಿ.ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2018, 13:37 IST
Last Updated 31 ಜುಲೈ 2018, 13:37 IST
ರಾಯಚೂರಿನಲ್ಲಿ ಮಂಗಳವಾರದಿಂದ ಆರಂಭವಾದ ಮಕ್ಕಳ ಸಹಾಯವಾಣಿ ತಂಡಗಳ ಸಿಬ್ಬಂದಿಯ ನಾಲ್ಕು ದಿನಗಳ ತರಬೇತಿ ಕಾರ್ಯಾಗಾರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ. ನಂದನೂರ ಮಾತನಾಡಿದರು 
ರಾಯಚೂರಿನಲ್ಲಿ ಮಂಗಳವಾರದಿಂದ ಆರಂಭವಾದ ಮಕ್ಕಳ ಸಹಾಯವಾಣಿ ತಂಡಗಳ ಸಿಬ್ಬಂದಿಯ ನಾಲ್ಕು ದಿನಗಳ ತರಬೇತಿ ಕಾರ್ಯಾಗಾರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ. ನಂದನೂರ ಮಾತನಾಡಿದರು    

ರಾಯಚೂರು: ಅನೇಕ ರೀತಿಯ ತೊಂದರೆಗಳ ನಡುವೆಯೂ ಮಕ್ಕಳ ರಕ್ಷಣೆಯಲ್ಲಿ ಪೊಲೀಸ್‌ ಇಲಾಖೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ದಾಖಲಾದ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗದಿರುವುದು ಬೇಸರದ ವಿಷಯ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ಪಾಟೀಲ ಹೇಳಿದರು.

ನಗರದ ಜೆ.ಸಿ.ಭವನದಲ್ಲಿಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹಾಗೂ ಚೈಲ್ಡ್‌ ಲೈನ್‌ ಇಂಡಿಯಾ ಫೌಂಡೇಷನ್‌ನಿಂದ ಮಂಗಳವಾರನಿಂದ ಆಯೋಜಿಸಿದ ರಾಯಚೂರು ಹಾಗೂ ಕಲಬುರ್ಗಿಮಕ್ಕಳ ಸಹಾಯವಾಣಿ ತಂಡಗಳ ಸಿಬ್ಬಂದಿಗೆ ನಾಲ್ಕು ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕೊಲೆ ಪ್ರಕರಣದಲ್ಲಿ ಬರುವ ತೀರ್ಪುಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ. ಆದರೆ, ಜೀವಂತ ಮಕ್ಕಳ ಪ್ರಕರಣಗಳಲ್ಲಿ ಆರೋಪಿಗಳಿಗೆ ಯಾವುದೇ ಶಿಕ್ಷೆಯಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ADVERTISEMENT

ಈ ತರಹದ ತರಬೇತಿಗಳು ಪೊಲೀಸ್ ಇಲಾಖೆಗೆ ದೊರೆಯಬೇಕಾಗಿದ್ದು, ತರಬೇತಿ ನೀಡಲು ಮುಂದೆ ಬಂದರೆ ಸಿಬ್ಬಂದಿಯನ್ನು ತರಬೇತಿಗೆ ನಿಯೋಜಿಸಲಾಗುತ್ತದೆ ಎಂದರು.

ಚೈಲ್ಡ್ ಲೈನ್ ಇಂಡಿಯಾ ಫೌಂಡೇಶನ್‌ನ ಚೆನ್ನೈ ದಕ್ಷಿಣ ಪ್ರಾಂತೀಯ ಸಂಪನ್ಮೂಲ ಕೇಂದ್ರ ಕಾರ್ಯಕ್ರಮ ಸಂಯೋಜಕ ಚಿತ್ರಾಂಚನ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತ ಸರ್ಕಾರದ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಚೈಲ್ಡ್ ಲೈನ್ 1098 ಯೋಜನೆ 24 ಗಂಟೆಗಳ ಉಚಿತ ತುರ್ತು ದೂರವಾಣಿ ಹಾಗೂ ಹೊರ ಸಂಪರ್ಕ ಸೇವೆ ನೀಡುತ್ತಿದೆ ಎಂದು ಹೇಳಿದರು.

ದೇಶದಲ್ಲಿ ಮಕ್ಕಳ ಸಹಾಯಕ್ಕಾಗಿ ಇರುವಂತಹ ಏಕೈಕ ಸಹಾಯವಾಣಿ ಇದಾಗಿದ್ದು, 1996 ರಲ್ಲಿ ಈ ಯೋಜನೆ ಆರಂಭಗೊಂಡಿದೆ. ದೇಶದಾದ್ಯಂತ ಚೈಲ್ಡ್ ಲೈನ್ ಕೇಂದ್ರಗಳು ಸ್ಥಾಪನೆಗೊಂಡಿವೆ ಎಂದು ವಿವರಿಸಿದರು.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಮಂಗಳಾ ಹೆಗೆಡೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಆರ್.ನಾಗರಾಜ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಕೆ.ನಂದನೂರ, ಕಾರ್ಮಿಕ ಇಲಾಖೆ ಅಧಿಕಾರಿ ವೆಂಕಟಸ್ವಾಮಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗುರು ಪ್ರಸಾದ, ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆ ಯೋಜನಾಧಿಕಾರಿ ಮಂಜುನಾಥರೆಡ್ಡಿ, ಅಯ್ಯಪ್ಪನ್, ಸಿಟಿ ಬೆಂಗಳೂರು ಸಹಾಯವಾಣಿ ಎಂ.ಸ್ವಾಮಿ, ಕಲಬುರಗಿ ಮಾರ್ಗದರ್ಶಿ ಸಂಸ್ಥೆ ನಿರ್ದೇಶಕ ಆನಂದರಾಜ್, ರಾಯಚೂರು ಮಕ್ಕಳ ಸಹಾಯವಾಣಿ ಸಂಯೋಜಕ ಸುದರ್ಶನ, ಕುರಿಯೋಕೊಸ್, ಜಯಶೀಲ ಧೋತರಬಂಡಿ, ಸತೀಶ್ ಫೆರ್ನಾಂಡೀಸ್, ಚಾರ್ಲಿ ಉದ್ಬಾಳ್, ಆರೋಗ್ಯಪ್ಪ ದುಮತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.