ರಾಮನಗರ: ‘ವಿದ್ಯಾರ್ಥಿನಿಲಯ ಮತ್ತು ಶಾಲೆಗಳಲ್ಲಿ ಅಡುಗೆ ಕೆಲಸಕ್ಕೆ ಮಕ್ಕಳನ್ನು ಬಳಸಿಕೊಳ್ಳುವಂತಿಲ್ಲ. ಒಂದು ವೇಳೆ ಬಳಸಿಕೊಂಡರೆ ಅದು ಅಪರಾಧವಾಗುತ್ತದೆ. ಅದನ್ನು ಮಕ್ಕಳ ಮೇಲಿನ ಶೋಷಣೆ ಎಂದೇ ಪರಿಗಣಿಸಲಾಗುತ್ತದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಾಲ್ಲೂಕು ಅಧಿಕಾರಿ ನಳಿನಾ ಸಿ ಕಾಗಿನೆಲೆ ತಿಳಿಸಿದರು.
ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಜಂಟಿಯಾಗಿ ರಾಮನಗರದ ಐಜೂರಿನ ಸರ್ಕಾರಿ ಬಿಸಿಎಂ ವಿದ್ಯಾರ್ಥಿ ನಿಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನಿಲಯ ಪಾಲಕರು, ನಿಲಯ ಮೇಲ್ವಿಚಾರಕರು ಮತ್ತು ಅಡುಗೆಯವರಿಗೆ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಮನೆಯಲ್ಲಿ ಮಕ್ಕಳು ತಾಯಿಗೆ ಅಡುಗೆ ಕೆಲಸಕ್ಕೆ ನೆರವು ನೀಡಿದರೆ ಅದು ತಪ್ಪಾಗುವುದಿಲ್ಲ. ಆದರೇ ಅದೇ ಕೆಲಸವನ್ನು ಮಕ್ಕಳು ಹಾಸ್ಟೆಲ್ಗಳಲ್ಲಿ ಮಾಡಿದರೆ ತಪ್ಪಾಗುತ್ತದೆ. ಹಾಗಾಗಿ ಅಡುಗೆ ಕೆಲಸದವರು ಎಚ್ಚರದಿಂದ ಇರಬೇಕು ಎಂದು ಅವರು ಕಿವಿಮಾತು ಹೇಳಿದರು.
ಅಡುಗೆ ಮನೆಯಲ್ಲಿ ಅಡುಗೆ ಅನಿಲದ ಸಿಲಿಂಡರ್, ಬೆಂಕಿ ಪಟ್ಟಣ, ಹರಿತವಾದ ಚಾಕು ಮತ್ತಿತರು ವಸ್ತುಗಳು ಇರುತ್ತವೆ. ಹಾಗಾಗಿ ಅಡುಗೆ ಮನೆಯೊಳಗೆ ವಿದ್ಯಾರ್ಥಿಗಳು ಪ್ರವೇಶಿಸದಂತೆ ನೋಡಿಕೊಳ್ಳಬೇಕು. ಮಾನಸಿಕ ಖಿನ್ನತೆ ಎದುರಿಸುತ್ತಿರುವ ಮಕ್ಕಳು ತನಗೆ ಗೊತ್ತಾಗದೆ ಅನಾಹುತಗಳನ್ನು ಮಾಡಿಕೊಳ್ಳಬಹುದು. ಆದ್ದರಿಂದ ಯಾವುದೇ ಮಕ್ಕಳು ಅಡುಗೆ ಮನೆಯೊಳಗೆ ಬಾರದಂತೆ ನೋಡಿಕೊಳ್ಳಿ ಎಂದು ಅವರು ತಿಳಿಸಿದರು.
ತರಕಾರಿ, ಸೊಪ್ಪನ್ನು ಸರಿಯಾಗಿ ತೊಳೆದು ಅಡುಗೆ ಮಾಡಬೇಕು. ಅಡುಗೆ ಮನೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಮಕ್ಕಳೊಂದಿಗೆ ಉತ್ತಮವಾಗಿ ಮಾತನಾಡಿ, ಅವರ ಹಸಿವನ್ನು ನೀಗಿಸುವ ಕೆಲಸವನ್ನು ಅಡುಗೆಯವರು ಮಾಡಬೇಕು. ಮಕ್ಕಳ ಮನಸ್ಸಿಗೆ ನೋವಾಗುವ ರೀತಿಯಲ್ಲಿ ಮಾತನಾಡಬಾರದು ಎಂದು ತಿಳಿಹೇಳಿದರು.
ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ತಾಜುದ್ದೀನ್ ಖಾನ್ ಮಾತನಾಡಿ, 1989ರಲ್ಲಿ ವಿಶ್ವದ ಬಹುತೇಕ ರಾಷ್ಟ್ರಗಳು ಒಗ್ಗೂಡಿ ವಿಶ್ವಸಂಸ್ಥೆಯೊಂದಿಗೆ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಒಡಂಬಡಿಕೆ ಮಾಡಿಕೊಂಡವು. ಭಾರತ 1992ರಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿತು. ಬಾಲ ಕಾರ್ಮಿಕ ಪದ್ಧತಿ ಸೇರಿದಂತೆ ಮಕ್ಕಳ ಮೇಲಿನ ದೌರ್ಜನ್ಯವನ್ನು ಯಶಸ್ವಿಯಾಗಿ ತಡೆಯಲು 10 ವರ್ಷ ಕಾಲಾವಕಾಶವನ್ನು ಭಾರತ ಕೋರಿತ್ತು. ಆದರೆ 2014 ಮುಗಿಯುತ್ತಾ ಬಂದರೂ ಈ ಒಪ್ಪಂದ ದೇಶದಲ್ಲಿ ಸಮಪರ್ಕವಾಗಿ ಜಾರಿಯಾಗಿಲ್ಲ ಎಂದು ವಿಶಾದಿಸಿದರು.
ದೇಶದಲ್ಲಿ ಶೇ 58ರಷ್ಟು ಬಾಲಕಿಯರ ಮೇಲೆ ಕುಟುಂಬದಲ್ಲಿಯೇ ಶೋಷಣೆ ನಡೆಯುತ್ತಿದೆ. ಕಳೆದ ವರ್ಷ ಭಾರತದಲ್ಲಿ ಅಂದಾಜು 50 ಲಕ್ಷ ಭ್ರೂಣ ಹತ್ಯೆಗಳು ನಡೆದಿವೆ. ಶಾಲೆ, ರಸ್ತೆ, ಬಸ್, ಕುಟುಂಬದ ನಾಲ್ಕು ಗೋಡೆಯಲ್ಲಿಯೇ ಮಕ್ಕಳ ಮೇಲೆ ವಿವಿಧ ರೀತಿಯ ದೌರ್ಜನ್ಯ, ಲೈಂಗಿಕ ಕಿರುಕುಳ, ಶೋಷಣೆ ನಡೆಯುತ್ತಿದೆ ಎಂದು ಅವರು ಅಂಕಿ ಅಂಶ ನೀಡಿದರು.
ವಿಶ್ವ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಪೂರಕವಾಗಿ ಮಕ್ಕಳಿಗೆ ಬದುಕುವ ಹಕ್ಕು, ರಕ್ಷಣೆಯ ಹಕ್ಕು, ಅಭಿವೃದ್ಧಿಯ ಹಕ್ಕು, ಭಾಗವಹಿಸುವ ಹಕ್ಕು ಪ್ರಾಪ್ತಿಯಾಗಿದೆ. ಆದರೆ ಇವು ದೇಶದಲ್ಲಿ ಸಮರ್ಪಕ ಅನುಷ್ಠಾನವಾಗಿಲ್ಲ. ಇದನ್ನು ಅನುಷ್ಠಾನಗೊಳಿಸುವ ಸಲುವಾಗಿ ಹೆಣ್ಣು ಶಿಶು ಭ್ರೂಣಹತ್ಯೆ ನಿಷೇಧ ಕಾಯ್ದೆ, ಬಾಲ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ, ಬಾಲ್ಯ ವಿವಾಹ ನಿಷೇಧ, ಪೋಕ್ಸೊ ಕಾಯ್ದೆ, ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ ಸೇರಿದಂತೆ ಹಲವು ಕಾನೂನುಗಳು ಜಾರಿಯಾಗಿವೆ. ಆದರೆ ಅವುಗಳ ಪಾಲನೆಯಲ್ಲಿ ದೇಶದ ಪ್ರಜ್ಞಾವಂತ ನಾಗರಿಕರು ಎಡವುತ್ತಿರುವುದು ವಿಪರ್ಯಾಸವೇ ಸರಿ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.