ADVERTISEMENT

‘ಕುಟುಂಬದವರಿಂದ ಬೀದಿಪಾಲಾಗಲಿರುವ ಎಚ್‌ಡಿಕೆ’

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 11:00 IST
Last Updated 8 ಜುಲೈ 2017, 11:00 IST

ಬಿಡದಿ: ‘ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಕುಟುಂಬದವರಿಂದಲೇ ಬೀದಿ ಪಾಲಾಗಲಿದ್ದಾರೆ’ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು.
ಇಲ್ಲಿನ ಜೋಗರದೊಡ್ಡಿ ಗ್ರಾಮದಲ್ಲಿ ಶುಕ್ರವಾರ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಕುಮಾರಸ್ವಾಮಿ ಅವರು ತಮ್ಮ ಕೆಟ್ಟ ನಡವಳಿಕೆಯಿಂದ ಇಂದು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇವರು ಸರಿಯಾಗಿದ್ದರೆ ಈಗಾಗಲೆ ಎರಡು ಬಾರಿ ಮುಖ್ಯಮಂತ್ರಿಯಾಗಿರುತ್ತಿದ್ದರು’ ಎಂದು ತಿಳಿಸಿದರು.

‘ಪ್ರಜ್ವಲ್‌ರೇವಣ್ಣ ಅವರು ಹೇಳಿರುವ ಹೇಳಿಕೆಗಳು ದೇವೇಗೌಡರ ಕುಟುಂಬದಲ್ಲಿ ನಡೆಯುತ್ತಿರುವ ಘಟನೆಗಳಾಗಿದ್ದು, ವಾಸ್ತವ ಸತ್ಯಗಳಾಗಿವೆ. ಈಗ ಜನರಿಗೆ ತಿಳಿಯುತ್ತಿದೆ. ನಮಗೆ ಇದೆಲ್ಲಾ ಮೊದಲೇ ತಿಳಿದಿತ್ತು’ ಎಂದರು.

ADVERTISEMENT

‘ಸೂಟ್‌ಕೇಸ್ ಇದ್ದರೆ ಮಾತ್ರ ಜೆಡಿಎಸ್ ಪಕ್ಷದಲ್ಲಿ ಟಿಕೆಟ್‌ ಎಂದು ಪ್ರಜ್ವಲ್‌ ರೇವಣ್ಣ ಹೇಳಿರುವುದು ಸರಿಯಾಗಿದೆ. ನನ್ನ ಬಳಿ ಸೂಟ್‌ಕೇಸ್ ಇಲ್ಲದಿರುವುದರಿಂದ ನಾನು ಜೆಡಿಎಸ್ ಪಕ್ಷದಲ್ಲಿ ಏನೂ ಆಗಲಿಲ್ಲ. ಪ್ರಜ್ವಲ್ ರೇವಣ್ಣ ಅವರ ರಾಜಕಾರಣಕ್ಕೆ ಕುಮಾರಸ್ವಾಮಿ ಪ್ರೋತ್ಸಾಹ ನೀಡದೆ ಅಡ್ಡಗಾಲು ಹಾಕುತ್ತಿರುವುದರಿಂದ ಈ ಎಲ್ಲಾ ಬೆಳವಣಿಗೆಗೆ ಕಾರಣವಾಗಿದೆ’ ಎಂದು ಅವರು ಹೇಳಿದರು.

ಎಚ್. ವಿಶ್ವನಾಥ್‌ ಅವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡ ಬಗ್ಗೆ ಮಾತನಾಡಿದ ಅವರು ‘ವಿಶ್ವನಾಥ್ ಅವರು ಅತಿ ಬುದ್ಧಿವಂತ ರಾಜಕಾರಣಿಯಾಗಿದ್ದು, ಬದುಕಿನ ರಾಜಕೀಯದ ಕೊನೆಯ ಸಮಯದಲ್ಲಿ ಮುಗ್ಗರಿಸಿರುವುದು ಬೇಸರದ ಸಂಗತಿ’ ಎಂದು ತಿಳಿಸಿದರು. ಬಿಡದಿ ಪುರಸಭೆ ಅಧ್ಯಕ್ಷೆ ವೆಂಕಟೇಶಮ್ಮರಾಮಕೃಷ್ಣಯ್ಯ, ಉಪಾಧ್ಯಕ್ಷೆ ವೈಶಾಲಿ, ಮುಖಂಡ ಕೆ.ರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.