ADVERTISEMENT

ಚನ್ನಪಟ್ಟಣ: ಒತ್ತುವರಿ ತೆರವು ನಾಳೆ ಆರಂಭ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2014, 10:46 IST
Last Updated 28 ನವೆಂಬರ್ 2014, 10:46 IST

ರಾಮನಗರ :  ಚನ್ನಪಟ್ಟಣ ತಾಲ್ಲೂಕಿನ ಪ್ರಮುಖ ರಸ್ತೆಗಳಲ್ಲಿ ಒಂದಾದ ಎಂ.ಜಿ ರಸ್ತೆ ಸಾಕಷ್ಟು ಒತ್ತುವರಿಯಾಗಿದ್ದು, ಅದರ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಶನಿವಾರದಿಂದ ಹಮ್ಮಿಕೊಳ್ಳುವುದಾಗಿ ಶಾಸಕ ಸಿ.ಪಿ. ಯೋಗೇಶ್ವರ್‌ ತಿಳಿಸಿದರು.

ಸ್ಥಳೀಯ ನಿವಾಸಿಗಳು, ಅಂಗಡಿಗಳ ಮಾಲೀಕರು, ನಗರಸಭೆ ಆಯುಕ್ತರು, ಸರ್ಕಲ್‌ ಇನ್‌ಸ್ಪೆಕ್ಟರ್‌ ಅವರ ಜತೆಯಲ್ಲಿ ಎಂ.ಜಿ ರಸ್ತೆಯ ಒತ್ತುವರಿ­ಯನ್ನು ಗುರುವಾರ ಪರಿಶೀಲಿಸಿದ ಅವರು, ಬಳಿಕ ಶಿವ ದೇವಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಈ ರಸ್ತೆಯನ್ನು ವಿಸ್ತೀರ್ಣಗೊಳಿಸುವ ಕುರಿತು ನಗರಸಭೆ ತೀರ್ಮಾನ ತೆಗೆದುಕೊಂಡಿತ್ತು. ರಸ್ತೆಯ ವರ್ತಕರು, ಅಂಗಡಿ ಮಾಲೀಕರನ್ನು ಸಹಮತಕ್ಕೆ ತೆಗೆದುಕೊಂಡು ಒತ್ತುವರಿ ತೆರವು ಕಾರ್ಯಾಚರಣೆಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ರಸ್ತೆಯ 600 ಮೀಟರ್‌ ಉದ್ದದ ಎರಡೂ ಬದಿಯಲ್ಲಿ ತಲಾ 8 ಅಡಿ ರಸ್ತೆಯನ್ನು ವಿಸ್ತರಿಸಲಾಗುತ್ತದೆ ಎಂದು ಅವರು ಪ್ರಕಟಿಸಿದರು.

ಪ್ರಸ್ತುತ ಇಲ್ಲಿ ಸಿಮೆಂಟ್‌ ರಸ್ತೆ ಇದ್ದು, ಕೆಲವೆಡೆ 10 ಅಡಿ, 12 ಅಡಿ ಹಾಗೂ 15 ಅಡಿ ಇದೆ. ಒತ್ತುವರಿ ತೆರವುಗೊಳಿಸಿದ ನಂತರ ಅದು ಅಂದಾಜು 31 ಅಡಿ ರಸ್ತೆಯಾಗಲಿದೆ. ಇದರಲ್ಲಿ ಚರಂಡಿ ಹಾಗೂ ಪಾದಚಾರಿ ಮಾರ್ಗಕ್ಕೂ ಜಾಗ ಬಿಡಲಾಗುವುದು ಎಂದು ಅವರು ಹೇಳಿದರು.

ಸ್ಥಳೀಯ ವ್ಯಾಪಾರಿಗಳು, ಸಾರ್ವಜನಿಕರಿಗೆ ತೊಂದರೆ ಆಗದಂತೆ ರಸ್ತೆ ವಿಸ್ತರಿಸಲಾಗುವುದು. ಈ ರಸ್ತೆಯಲ್ಲಿ ಏಕ ಮುಖ ಸಂಚಾರ ಜಾರಿಗೊಳಿಸುವಂತೆ ಹಾಗೂ ನಾಲ್ಕು ಚಕ್ರದ ವಾಹನಗಳ ಸಂಚಾರ ನಿಷೇಧಿಸುವಂತೆ ವರ್ತಕರು ಮನವಿ ಮಾಡಿದ್ದಾರೆ. ಅದನ್ನು ಪೊಲೀಸರಿಗೆ ಸೂಚಿಸಿದ್ದು, ಪ್ರಾಯೋಗಿಕವಾಗಿ ಕೆಲ ಸಂಚಾರ ನಿಯಂತ್ರಣ ನಿಯಮಗಳನ್ನು ಬಳಸುವುದಾಗಿ ಅವರು ತಿಳಿಸಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ಪಾದಚಾರಿ ವ್ಯಾಪಾರಿಗಳ ತೆರವು:
ಪಟ್ಟಣದ ಬಹುತೇಕ ಕಡೆ ಪಾದಚಾರಿ ವ್ಯಾಪಾರಿಗಳು ಹೆಚ್ಚಾಗಿದ್ದಾರೆ. ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಿದ್ದರೂ ಅಲ್ಲಿಗೆ ಹೋಗಲು ನಿರಾಕರಿಸುತ್ತಿದ್ದಾರೆ. ಅಲ್ಲದೆ ಲಾಬಿಯನ್ನು ನಡೆಸಿದ್ದಾರೆ. ಆದರೆ ಇದ್ಯಾವುದಕ್ಕೂ ಮಣಿಯದಿರಲು ನಗರಸಭೆ ನಿರ್ಧರಿಸಿದೆ. ರಸ್ತೆ ಬದಿ ವ್ಯಾಪಾರಿಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಶುಕ್ರವಾರವೇ  ಚಾಲನೆ ದೊರೆಯಲಿದೆ ಎಂದು ಅವರು ಹೇಳಿದರು.

ಪಟ್ಟಣದಲ್ಲಿ ಇರುವ ಮಾಂಸದ ಅಂಗಡಿಯವರಿಗೂ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಅವರಿಗೆ ಪರವಾನಗಿ ನೀಡಿ, ಸೂಕ್ತ ಸೌಲಭ್ಯ ಕಲ್ಪಿಸಲಾಗುವುದು ಎಂದು ಉತ್ತರಿಸಿದರು.

ನಗರಸಭೆ ಅಧ್ಯಕ್ಷೆ ಅಖಿಲಾ ಬಾನು, ಉಪಾಧ್ಯಕ್ಷ ಮುದ್ದುಕೃಷ್ಣ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎ.ಸಿ.ವಿರೇಗೌಡ, ನಗರಸಭೆ ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.