ಮಾಗಡಿ: ರಂಗಕಲೆಯನ್ನು ದೆಹಲಿಯ ಕರ್ನಾಟಕ ಸಂಘದ ಸಭಾಂಗಣದಲ್ಲಿ ಅತ್ಯುತ್ತಮವಾಗಿ ಪ್ರದರ್ಶಿಸಿ ಮಾಗಡಿ ಸೀಮೆಯ ಸೊಗಡನ್ನು ಹರಡಿ ಬನ್ನಿ ಎಂದು ಕಲಾಪೋಷಕ ಮುಮ್ಮೇನಹಳ್ಳಿ ಜಯರಾಮ್ ತಿಳಿಸಿದರು.
ದೆಹಲಿಯಲ್ಲಿ ಗಂಗೇಗೌರಿ ಪೌರಾಣಿಕ ನಾಟಕ ಪ್ರದರ್ಶಿಸಲು ತೆರಳಿದ ತಿರುಮಲೆ ರಂಗನಾಥ ಸ್ವಾಮಿ ಸಾಂಸ್ಕೃತಿಕ ಕಲಾ ಸಂಘದ ರಂಗಕಲಾವಿದರನ್ನು ಬಸ್ ನಿಲ್ದಾಣದಿಂದ ಬುಧವಾರ ಸಂಜೆ ಬೀಳ್ಕೊಟ್ಟು ಅವರು ಮಾತನಾಡಿದರು.
ಹಿರಿಯ ಕಲಾವಿದ ತಿರುಮಲೆ ಬಸವರಾಜು ಮಾತನಾಡಿ ರಂಗಕಲೆ ಮತ್ತು ಕಲಾವಿದರನ್ನು ಉಳಿಸಲು ದೇಶದ ರಾಜಧಾನಿಯಲ್ಲಿ ಮೊದಲ ಬಾರಿಗೆ ಮಾಗಡಿಯಿಂದ ಕಲಾವಿದರ ತಂಡದೊಂದಿಗೆ ಹೊರಟಿದ್ದೇವೆ, ದೆಹಲಿಯ ಕನ್ನಡಿಗರು ಪೌರಾಣಿಕ ಗಂಗೇಗೌರಿ ನಾಟಕ ಅಭಿನಯಿಸುವಂತೆ ಕರೆನೀಡಿದ್ದರು, ಕಲಾಭಿಮಾನಿಗಳಿಗೆ ನಿರಾಶೆ ಉಂಟು ಮಾಡಬಾರದು ಎಂಬ ಉದ್ದೇಶದಿಂದ ಗ್ರಾಮೀಣ ಕಲಾವಿದರು ಹೊರಟಿದ್ದೇವೆ ಎಂದರು.
ಕಲಾವಿದರಾದ ಗೋವಿಂದರಾಜು, ಹುಲ್ಲೂರಯ್ಯ, ಈರಣ್ಣ, ರಾಜು,ಪದ್ಮಾಗಿರೀಶ್, ಚನ್ನೇಗೌಡ, ಅಣ್ಣಯ್ಯ,ಚಂದ್ರಶೇಖರಯ್ಯ, ಸಂಜೀವ ಕುಮಾರ, ಕೃಷ್ಣಪ್ಪ,ರಂಗನಾಥ್,ಮಾರಪ್ಪ, ರಂಗನಿರ್ದೇಶಕ ಮುನಿಯಪ್ಪ, ತಬಲ ಎಚ್.ಎಂ.ಶ್ರೀನಿವಾಸ್, ವ್ಯವಸ್ಥಾಪಕ ನಾರಾಯಣಪ್ಪ, ಕಲ್ಯದ ಹನುಮಂತರಾಜು ಇದ್ದರು.
ಮಾಗಡಿಯ ಹಿರಿಯ ರಂಗಕಲಾವಿದರು ಉಪಸ್ಥಿತರಿದ್ದು ದೆಹಲಿಗೆ ತೆರಳಿದ ಕಲಾವಿದರನ್ನು ಗೌರವಿಸಿ ಬೀಳ್ಕೊಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.