ADVERTISEMENT

ಮರುಕಳಿಸಿದ ಕಲ್ಯಾಣಿ ಗತವೈಭವ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2017, 9:15 IST
Last Updated 6 ಡಿಸೆಂಬರ್ 2017, 9:15 IST
ಶಿಬಿರಾರ್ಥಿಗಳು ಸ್ವಚ್ಛಗೊಳಿಸಿದ ನಂತರ ಕಲ್ಯಾಣಿ
ಶಿಬಿರಾರ್ಥಿಗಳು ಸ್ವಚ್ಛಗೊಳಿಸಿದ ನಂತರ ಕಲ್ಯಾಣಿ   

ಚನ್ನಪಟ್ಟಣ: ತಾಲ್ಲೂಕಿನ ಬ್ರಹ್ಮಣೀಪುರ ಗ್ರಾಮದಲ್ಲಿ ಗಿಡಗಂಟಿಗಳಿಂದ ತುಂಬಿ ಮುಚ್ಚಿಹೋಗಿದ್ದ ಐತಿಹಾಸಿಕ ಕಲ್ಯಾಣಿ ಸ್ವಚ್ಛಗೊಳಿಸಿ ಅದಕ್ಕೊಂದು ರೂಪ ಕೊಟ್ಟಿದ್ದಾರೆ ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು.

ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಗ್ರಾಮದಲ್ಲಿ ಹಮ್ಮಿಕೊಂಡಿರುವ ಏಳು ದಿನಗಳ ವಿಶೇಷ ಶಿಬಿರದ ಸಮಯದಲ್ಲಿ ವಿದ್ಯಾರ್ಥಿಗಳು ಈ ಪುರಾತನ ಕಲ್ಯಾಣಿ ಸ್ವಚ್ಛಗೊಳಿಸಿ, ಅದನ್ನು ಕಾಪಾಡಿಕೊಳ್ಳುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ.

ಇಲ್ಲೊಂದು ಕಲ್ಯಾಣಿ ಇತ್ತು ಎಂಬುದನ್ನೆ ಮರೆತು ಹೋಗುವಂತೆ ಅಲ್ಲಿ ಗಿಡಗಂಟಿ, ಮಣ್ಣು ತುಂಬಿ ಹೋಗಿತ್ತು. ಅದನ್ನು ಕಾಪಾಡಬೇಕಾದ ಪುರಾತತ್ವ ಇಲಾಖೆ ನಿರ್ಲಕ್ಷ್ಯ ವಹಿಸಿತ್ತು. ಇದನ್ನು ಗಮನಿಸಿದ ವಿದ್ಯಾರ್ಥಿಗಳು ಸ್ವಚ್ಛಗೊಳಿಸುವ ನಿರ್ಧಾರ ಮಾಡಿ, ಒಂದು ದಿನದ ಅವಧಿಯಲ್ಲಿ ಕೆಲಸ ಮುಗಿಸಿದ್ದಾರೆ ಎಂದು ಯೋಜನೆ ಶಿಬಿರಾಧಿಕಾರಿ ಕೆ.ರಾಮು ತಿಳಿಸಿದರು.

ADVERTISEMENT

ಶಿಬಿರದ ವೇಳೆ ಗ್ರಾಮದಲ್ಲಿ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದಾರೆ. ಆದರೆ, ಕಲ್ಯಾಣಿ ಸ್ವಚ್ಛ ಮಾಡುವ ಕಾರ್ಯ ಅದರಲ್ಲಿ ಸೇರಿರಲಿಲ್ಲ. ಕಲ್ಯಾಣಿ‌ ದುಸ್ಥಿತಿ ನೋಡಿದ ವಿದ್ಯಾರ್ಥಿಗಳು ಗ್ರಾಮಸ್ಥರ ಸಹಕಾರದೊಂದಿಗೆ ಅದಕ್ಕೆ ಗತವೈಭವ ತಂದುಕೊಟ್ಟಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ಸಿದ್ದರಾಜೇಗೌಡ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಇಂತಹ ಐತಿಹಾಸಿಕ ಸ್ಥಳಗಳಿಗೆ ದುಸ್ಥಿತಿ ಒದಗಿ ಬಂದಿದೆ. ಆಯಾ ಗ್ರಾಮಗಳ ಯುವ ಸಮೂಹ ಸ್ವಚ್ಛ ಮಾಡಿ  ರಕ್ಷಿಸಿಕೊಳ್ಳಬೇಕು ಎಂದು ಶಿಬಿರಾರ್ಥಿಗಳು ಹೇಳಿದರು.

ಗ್ರಾಮದ ಕೆಂಗಲ್ ಕಲಾ ಬಳಗದ ಅಧ್ಯಕ್ಷ ಅರಸೇಗೌಡ, ಮುಖಂಡರಾದ ನಾಗರಾಜು, ಅರಸಣ್ಣ, ಕೆಂಗಲ್ಲಣ್ಣ, ಚಿಕ್ಕಅರಸೇಗೌಡ, ಉಪನ್ಯಾಸಕ ಅರಸೇಗೌಡ, ಯುವ ಮುಖಂಡರಾದ ವೆಂಕಟೇಶ್, ರೈತ ಸಂಘದ ವೆಂಕಟೇಶ್, ಹಿರಿಯ ವಿದ್ಯಾರ್ಥಿಗಳಾದ ಚಂದ್ರಶೇಖರ್, ಪ್ರಭುಲಿಂಗ, ಶರತ್, ಸಾಹಿತಿ ವಿಜಯ್ ರಾಂಪುರ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.