ರಾಮನಗರ: ನನ್ನ ಮತ್ತು ಸಚಿವ ಡಿ.ಕೆ. ಶಿವಕುಮಾರ್ ನಡುವಿನ ಮಾತುಕತೆ ಕೇವಲ ಔಪಚಾರಿಕವಾಗಿದ್ದು, ಮಾಧ್ಯಮಗಳು ಅದಕ್ಕೆ ವಿಶೇಷ ಅರ್ಥ ಕಲ್ಪಿಸಬಾರದು ಎಂದು ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು.
ತಾಲ್ಲೂಕಿನ ಚನ್ನೇನಹಳ್ಳಿ ಗ್ರಾಮದಲ್ಲಿ ಸೋಮವಾರ ದೇವಸ್ಥಾನದ ಉದ್ಘಾಟನೆ ಸಂದರ್ಭ ಅವರು ಪತ್ರಕರ್ತರ ಜತೆ ಮಾತನಾಡಿದರು.
'ಚನ್ನಪಟ್ಟಣದಲ್ಲಿ ಶನಿವಾರ ನಡೆದ ಕನಕ ಜಯಂತಿ ಕಾರ್ಯಕ್ರಮದ ವೇದಿಕೆಯಲ್ಲಿ ನಾನು ಹಾಗೂ ಶಿವಕುಮಾರ್ ಅಕ್ಕಪಕ್ಕ ಕುಳಿತಿದ್ದರಿಂದ ಸಹಜವಾಗಿ ಯೋಗಕ್ಷೇಮ ವಿಚಾರಿಸಿಕೊಂಡೆವು. ಆದರೆ, ಅಲ್ಲಿ ಯಾವುದೆ ರಾಜಕೀಯದ ಮಾತುಕತೆ ಆಗಿಲ್ಲ. ಮಾಧ್ಯಮಗಳು ಇದನ್ನೇ ಬಳಸಿಕೊಂಡು ಜೆಡಿಎಸ್- ಕಾಂಗ್ರೆಸ್ ಮೈತ್ರಿ ಎಂದೆಲ್ಲ ಸುದ್ದಿ ಹಬ್ಬಿಸುವುದು ಬೇಡ. ಸದ್ಯ ಅಂತಹ ಯಾವುದೆ ಪ್ರಸ್ತಾವ ಇಲ್ಲ’ ಎಂದರು.
'ಈ ಹಿಂದೆ ನಾನು ಶಾಸಕಿಯಾಗಿದ್ದಾಗ ವಿಧಾನಸೌಧದಲ್ಲಿ ಮುಖಾಮುಖಿ ಆದ ಸಂದರ್ಭಗಳಲ್ಲಿ ಇಬ್ಬರು ಪರಸ್ಪರ ಮಾತನಾಡಿದ್ದೇವೆ. ಅದರಲ್ಲಿ ಯಾವ ವಿಶೇಷವೂ ಇಲ್ಲ' ಎಂದರು.
ಚನ್ನಪಟ್ಟಣದಲ್ಲಿ ನನ್ನ ಸ್ಪರ್ಧೆ ಕುರಿತು ವರಿಷ್ಠರು ನಿರ್ಧರಿಸಲಿದ್ದಾರೆ. ಅದಕ್ಕಿನ್ನು ಕಾಲಾವಕಾಶ ಇದೆ ಎಂದು ಅವರು ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.