ADVERTISEMENT

ವಿದೇಶಿ ಪ್ರಭಾವ: ಜಾನಪದ ಕಲೆ ನಾಶ

​ಪ್ರಜಾವಾಣಿ ವಾರ್ತೆ
Published 24 ಮೇ 2017, 10:42 IST
Last Updated 24 ಮೇ 2017, 10:42 IST

ಬೇವೂರು (ಚನ್ನಪಟ್ಟಣ): ಪಾಶ್ಚಿಮಾತ್ಯ ಸಂಗೀತದ ಅಬ್ಬರದಲ್ಲಿ ಜಾನಪದ ಕಲೆಗಳು ನಶಿಸಿಹೋಗುತ್ತಿವೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ಗೌಡ ವಿಷಾದಿಸಿದರು.

ಗ್ರಾಮದಲ್ಲಿ ಉದಯ ಸಾಂಸ್ಕೃತಿಕ ಸೇವಾ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಈಚೆಗೆ ಆಯೋಜಿಸಲಾಗಿದ್ದ ಜಾನಪದ ಗ್ರಾಮೀಣ ಕಲೆಗಳ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹಿಂದಿನ ಪರಂಪರೆಯ ಜನರು ಅನುಸರಿಸುತ್ತಿದ್ದ ಬದುಕಿನ ಸಂಸ್ಕೃತಿ ಇಂದು ಬೇಡವಾಗಿದೆ. ಎಲ್ಲರಿಗೂ ವಿದೇಶಿ ಸಂಸ್ಕೃತಿ ಇಷ್ಟವಾಗುತ್ತಿದೆ ಎಂದು ಅವರು ಬೇಸರ ಈ ಸಂದರ್ಭದಲ್ಲಿ  ವ್ಯಕ್ತಪಡಿಸಿದರು.

ADVERTISEMENT

ಜಾನಪದವು ತಲೆಮಾರುಗಳಿಗೆ ಉಳಿಯಬೇಕಾದರೆ ಕಿರಿಯ ವಯಸ್ಸಿನ ಮಕ್ಕಳಿಗೆ ಜಾನಪದ ಕಲೆಗಳನ್ನು ಕಲಿಸಬೇಕಿದೆ. ಅವರಲ್ಲಿ ಜಾನಪದದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕಿದೆ. ಆಗಷ್ಟೇ ಮುಂದಿನ ತಲೆಮಾರಿಗೆ ಜಾನಪದದ ಇತಿಹಾಸ ಉಳಿಯಲು ಸಾಧ್ಯ ಎಂದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಪೂಜಾ ಕುಣಿತ, ಡೊಳ್ಳು ಕುಣಿತ, ಪಟದ ಕುಣಿತ ಗಾರುಡಿ ಗೊಂಬೆ, ತಮಟೆ ವಾದನ ಕಲಾ ತಂಡಗಳ ಮೆರವಣಿಗೆ ನಡೆಯಿತು. ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಸಿಂ.ಲಿಂ.ನಾಗರಾಜು, ನಿಕಟಪೂರ್ವ ಅಧ್ಯಕ್ಷ ಬಿ.ಟಿ.ನಾಗೇಶ್, ಸಾಹಿತಿ ವಿಜಯ್ ರಾಂಪುರ, ಡಿ. ರಾಜಶೇಖರ್, ಚೌ.ಪು.ಸ್ವಾಮಿ, ಗ್ರಾಮ ಪಂಚಾಯಿತಿಯ ಸದಸ್ಯರಾದ ಬೋರೇಗೌಡ, ರಾಮಣ್ಣ, ಅಮ್ಜದ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವಿಷಕಂಠಯ್ಯ ಮುಂತಾದವರು ಭಾಗವಹಿಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.