ADVERTISEMENT

‘ವಿಶ್ವಕ್ಕೆ ದೇಶದ ಸಂಸ್ಕೃತಿ ಪರಿಚಯಿಸಿದ ಮಹನೀಯ’

ಸ್ವಾಮಿ ವಿವೇಕಾನಂದರ 154ನೇ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 6:49 IST
Last Updated 19 ಜನವರಿ 2017, 6:49 IST
‘ವಿಶ್ವಕ್ಕೆ ದೇಶದ ಸಂಸ್ಕೃತಿ ಪರಿಚಯಿಸಿದ ಮಹನೀಯ’
‘ವಿಶ್ವಕ್ಕೆ ದೇಶದ ಸಂಸ್ಕೃತಿ ಪರಿಚಯಿಸಿದ ಮಹನೀಯ’   

ರಾಮನಗರ: ‘ಕೇವಲ 39 ವರ್ಷ ಜೀವಿ­ಸಿದರೂ ಅದ್ಭುತ ವಾಕ್ಚಾತುರ್ಯ ಮತ್ತು ತತ್ವಜ್ಞಾನದ ಮೂಲಕ ಭಾರತೀಯ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ’ ಎಂದು ಚನ್ನಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಮಧುಸೂದನ ಜೋಶಿ ಶ್ಲಾಘಿಸಿದರು.

ಜಿಲ್ಲಾಡಳಿತ, ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ನಗರದ ಗುರುಭವನದಲ್ಲಿ ಸ್ವಾಮಿ ವಿವೇಕಾನಂದರ 154ನೇ ಜಯಂತಿಯ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿವೇಕಾನಂದ ಅವರಂತಹ ಮೇರು ವ್ಯಕ್ತಿತ್ವದವರು ಯುವ ಪೀಳಿಗೆ ಭವಿಷ್ಯ ನಿರ್ಮಾಣದಲ್ಲಿ ಸ್ಫೂರ್ತಿದಾಯಕ’ ಎಂದರು.

‘ಭಾರತದ ಅಧ್ಯಾತ್ಮವನ್ನು ಕಡಲಾಚೆ ಒಯ್ದ ಹೆಗ್ಗಳಿಕೆ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ. ಆಧುನಿಕತೆಯ ಪ್ರಭಾವದಿಂದ ನಾವು ಭೌತಿಕವಾಗಿ ಬೆಳವಣಿಗೆಯಾದರೂ, ಅನುಷ್ಠಾನದಲ್ಲಿ ಸೋಲು­ತ್ತಿದ್ದೇವೆ. ಸ್ವಾಮಿ ವಿವೇಕಾನಂದರ ಅತ್ಯು­ನ್ನತ ವಿಚಾರಧಾರೆ ಯುವಕರಿಗೆ  ಸ್ಫೂರ್ತಿ­­ಯಾಗಬೇಕು’ ಎಂದು ತಿಳಿಸಿದರು.

‘ಮನಸನ್ನು ಪರಿವರ್ತನೆ ಮಾಡುವ ಶಕ್ತಿ ಹೊಂದಿದ್ದ ವಿವೇಕಾನಂದರ ಜೀವನ ಎಲ್ಲರಿಗೂ ಆದರ್ಶವಾಗಬೇಕು. ಗುರಿ ಸಾಧನೆಯಲ್ಲಿ ಮಗ್ನರಾದರೆ ಮಾತ್ರ ಯಶಸ್ಸು ಸಾಧ್ಯ. ಜಗತ್ತಿಗೆ ಸಂಸ್ಕೃತಿಯನ್ನು ಪರಿಚಯಿಸಿದ ಭಾರತದ ಯುವಜನತೆ ಪಾಶ್ಚಿಮಾತ್ಯರ ಅನುಕರಣೆ ಮಾಡುವುದು ನಿಲ್ಲಬೇಕು. ಸಮಸ್ಯೆ ಎದುರಿಸಲು ಗಟ್ಟಿ ಮನಸ್ಸು ಬೇಕು. ಭಾರತದ ಸಂಸ್ಕೃತಿ ಉಳಿಸುವ ಭಾರ ಮಹಿಳೆಯರ ಕೈಯಲ್ಲಿದೆ’ ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ವಿ.ಎಚ್. ರಾಜಶೇಖರ್‌ ಮಾತನಾಡಿ ‘ವಿವೇಕಾನಂದರ ಮೌಲ್ಯಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸತ್ಪ್ರಜೆಯಾಗಿ ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಯುವಕರು ವ್ಯಸನಿಗಳಾಗದೇ ಉತ್ತಮ ಹವ್ಯಾಸ ರೂಢಿಸಿಕೊಂಡು ಸದೃಢ ಭಾರತ ನಿರ್ಮಾಣಕ್ಕೆ ಕೈಜೋಡಿಸಿ. ಉನ್ನತ ಸ್ಥಾನ ಪಡೆಯಬೇಕು’ ಎಂದು ಅವರು ತಿಳಿಸಿದರು.

‘ಯುವಕರಿಂದ ಮಾತ್ರ ಸಶಕ್ತ ದೇಶ ನಿರ್ಮಾಣ ಸಾಧ್ಯ ಎಂದು ವಿವೇಕಾನಂದರು ತಿಳಿಸಿದ್ದರು ಎಂದು ಅವರು ಹೇಳಿದರು.ಯುವ ಜನತೆ ದುಶ್ಚಟ­­ಗಳಿಗೆ ಬಲಿಯಾಗದೆ, ಅಮೂಲ್ಯ ಬದುಕನ್ನು ಸಾರ್ಥಕ ಮಾಡಿಕೊಳ್ಳ­ಬೇಕು’ ಎಂದು ಅವರು ಹೇಳಿದರು.

ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಪಿ. ಶೈಲಜಾ ಉದ್ಘಾಟಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಆರ್‌. ಪ್ರಶಾಂತ್, ತಹಶೀಲ್ದಾರ್‌ ಎನ್‌. ರಘುಮೂರ್ತಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಂ.ಕೆ. ಮುನಿರಾಜು, ಡಾ. ಪದ್ಮಾವತಿ, ಯುವಜನ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ಡಾ. ಟಿ.ಡಿ. ಕನಕಾ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.