ADVERTISEMENT

ಶಾಲಾವಾಹನ ಅಪಘಾತ: ಸಾವು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 6:10 IST
Last Updated 17 ನವೆಂಬರ್ 2017, 6:10 IST

ಮರಳವಾಡಿ (ಕನಕಪುರ): ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ವಾಹನ ಅಪಘಾತಕ್ಕೀಡಾಗಿ ಒಬ್ಬ ವಿದ್ಯಾರ್ಥಿ ಮೃತಪಟ್ಟು 8ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಮರಳವಾಡಿ ಬಳಿಯ ಅನ್ನಪೂರ್ಣೇಶ್ವರಿ ದೇವಸ್ಥಾನದ ಬಳಿ ಗುರುವಾರ ಸಂಭವಿಸಿದೆ.

ಅಪಘಾತದಲ್ಲಿ ಮರಳವಾಡಿ ಹೋಬಳಿಯ ಗೆಂಡೇಗೌಡನದೊಡ್ಡಿ ಗ್ರಾಮದ ಜಯಲಕ್ಷ್ಮೀ ಮತ್ತು ಗಣೇಶ್‌ ದಂಪತಿಯ 7ವರ್ಷದ ಮಗು ಚರಣ್‌ ಸ್ಥಳದಲ್ಲೇ ಮೃತಪಟ್ಟಿದ್ದಾನೆ. 8 ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, 2ಮಕ್ಕಳು ನಿಮ್ಹಾನ್ಸ್‌ನಲ್ಲಿ, 6 ಮಕ್ಕಳು‌ ವಿಕ್ಟೋರಿಯಾದಲ್ಲಿ ದಾಖಲಾಗಿದ್ದಾರೆ.

ಗುರುವಾರ ಬೆಳಿಗ್ಗೆ 9ಕ್ಕೆ ಕಲ್ಲನಕುಪ್ಪೆಯಿಂದ ಸುಮಾರು 20 ಮಕ್ಕಳನ್ನು ಶಾಲಾ ವಾಹನದಲ್ಲಿ ದಾನಪ್ಪ ಎಂಬ ಚಾಲಕರು ಅನ್ನಪೂ ರ್ಣೇಶ್ವರಿ ದೇವಸ್ಥಾನದಲ್ಲಿರುವ ಋಷಿಗುರುಕುಲಂನ ಆಶ್ರಮ ಶಾಲೆಗೆ ಕರೆದೊಯ್ಯುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ADVERTISEMENT

ಮರಳವಾಡಿಯಿಂದ ಅನ್ನಪೂರ್ಣೇಶ್ವರಿ ದೇವಸ್ಥಾನದ ಮಾರ್ಗವಾಗಿ ತೇರುಬೀದಿ ಹುಣಸನಹಳ್ಳಿಗೆ ರಸ್ತೆ ಹೋಗುತ್ತದೆ. ತೇರುಬೀದಿಯಿಂದ ಸಾರಿಗೆ ಸಂಸ್ಥೆ ಬಸ್‌ ಮರಳವಾಡಿಗೆ ಬರುತ್ತಿರುವಾಗ ದೇವಸ್ಥಾನದ ಸಮೀಪದಲ್ಲಿರುವ ಪೆಟ್ರೋಲ್‌ ಬಂಕ್‌ನಲ್ಲಿ ಶಾಲಾ ಬಸ್ಸಿಗೆ ಡೀಸೆಲ್‌ ಹಾಕಿಸಿಕೊಂಡ ಚಾಲಕ ದಾನಪ್ಪ ಮೊಬೈಲ್‌ನಲ್ಲಿ ಮಾತನಾಡಿಕೊಂಡು ಅಜಾಗರೂಕತೆಯಿಂದ ಬಸ್‌ಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.

ಭೇಟಿ: ಅಪಘಾತದಲ್ಲಿ ಗಾಯಗೊಂಡು ಬೆಂಗಳೂರಿನ ನಿಮ್ಹಾನ್ಸ್‌ ಮತ್ತು ವಿಕ್ಟೋರಿಯಾ ಆಸ್ಪತ್ರೆಗೆ ಮಕ್ಕಳು ದಾಖಲಾಗಿರುವ ವಿಚಾರ ತಿಳಿದ ಜಿಲ್ಲಾಧಿಕಾರಿ ಡಾ.ಬಿ.ಆರ್‌.ಮಮತಾ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು.

ಪ್ರತಿಭಟನೆ: ಗುರುಕುಲ ಶಾಲೆಯ ವಾಹನದ ಚಾಲಕ ದಾನಪ್ಪನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿ ಮಗು ಮೃತಪಟ್ಟಿದೆ. ಉಳಿದ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದರೂ ಶಾಲೆಗೆ ಸಂಬಂಧಿಸಿದವರು ಮಕ್ಕಳ ಆರೋಗ್ಯ ವಿಚಾರಿಸಿಲ್ಲ ಎಂದು ಆಕ್ರೋಶಗೊಂಡ ಮಕ್ಕಳ ಪೋಷಕರು ಆಶ್ರಮದ ಮುಂದೆ ಮಗುವಿನ ಶವವನ್ನಿಟ್ಟು ಪ್ರತಿಭಟನೆ ನಡೆಸಿದರು.

ಪರಿಸ್ಥಿತಿ ತಿಳಿ: ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ತಹಶೀಲ್ದಾರ್‌ ಆರ್‌.ಯೋಗಾನಂದ ಭೇಟಿ ನೀಡಿ ಶಾಲಾ ಆಡಳಿತ ಮಂಡಳಿ ಹಾಗೂ ಪ್ರತಿಭಟನೆ ನಡೆಸುತ್ತಿದ್ದ ಪೋಷಕರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.