ರಾಮನಗರ: 'ರಂಗಭೂಮಿ ಇಂದು ಕೇವಲ ಮನರಂಜನೆಯ ಮಾಧ್ಯಮವಾಗಿ ಉಳಿದಿಲ್ಲ. ಅದು ಸಮಾಜಮುಖಿಯಾಗಿರುವುದು ಮತ್ತು ಸಮಾಜದ ಪರಿವರ್ತನೆಗೆ ಸಾಂಸ್ಕೃತಿಕ ಮಾಧ್ಯಮವಾಗಿರುವುದರಿಂದಲೇ ರಂಗಭೂಮಿ ಹೊಸ ಹೊಸ ಪ್ರಯೋಗಗಳ ಮೂಲಕ ಪ್ರಖರವಾಗಿ ಬೆಳೆಯುತ್ತಿದೆ' ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಗುಡಿಹಳ್ಳಿ ನಾಗರಾಜ ತಿಳಿಸಿದರು.
ಗೋಕುಲಾಷ್ಠಮಿ ಅಂಗವಾಗಿ ತಾಲ್ಲೂಕಿನ ಕೃಷ್ಣಾಪುರದೊಡ್ಡಿಯಲ್ಲಿ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪೌರಾಣಿಕ ರಂಗಗೀತಗಾಯನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
‘ಪ್ರಪಂಚದಲ್ಲಿ ಹಲವು ಮಾದ್ಯಮಗಳು ಹೆಚ್ಚು ಮನರಂಜನೆಯನ್ನು ನೀಡುತ್ತಾ ಬಂದಿದ್ದರೂ ರಂಗಭೂಮಿ ತನ್ನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದೆ. ರಂಗಭೂಮಿ ಕಲೆಯ ಬಗ್ಗೆ ಯುವ ಸಮುದಾಯ ಹೆಚ್ಚು ಹೆಚ್ಚು ಆಸಕ್ತರಾಗುತ್ತಿರುವುದು ಇದಕ್ಕಿರುವ ಶಕ್ತಿಯನ್ನು ತೋರಿಸುತ್ತದೆ' ಎಂದು ತಿಳಿಸಿದರು.
‘ರಂಗಭೂಮಿಯು ಯುವ ಸಮುದಾಯದಲ್ಲಿ ಆತ್ಮವಿಶ್ವಾಸವನ್ನು ಮೂಡಿಸುತ್ತದೆ. ಮಕ್ಕಳಲ್ಲಿ ಸಂಕುಚಿತ ಮನೋಭಾವನೆಯನ್ನು ತೊಡೆದು ಹಾಕಿ ಅವರು ಸಮಾಜಮುಖಿಯಾಗಿರುವಂತೆ ಪ್ರೇರೇಪಿಸುತ್ತದೆ. ಅಲ್ಲದೆ ಅವರಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಸಹಾಯ ಮಾಡುತ್ತದೆ’ ಎಂದು ತಿಳಿಸಿದರು.
ಗೋಕುಲಾಷ್ಠಮಿ ಅಂಗವಾಗಿ ಮಕ್ಕಳಿಗಾಗಿ ರಾಧಾಕೃಷ್ಣ ವೇಷಭೂಷಣ ಸ್ಪರ್ಧೆ ನಡೆಯಿತು. ರಾತ್ರಿ ನಾಡಿನ ಹೆಸರಾಂತ ಮಹಿಳಾ ವೃತ್ತಿ ಕಲಾವಿದರ ತಂಡವು ಬಿ.ಆರ್. ಅರಿಷಿಣಗೋಡಿ ಅವರು ರಚಿಸಿರುವ, ಮಾಲತಿಶ್ರೀ ಮೈಸೂರು ನಿರ್ದೇಶನದಲ್ಲಿ ಪ್ರದರ್ಶಿಸಲಾದ ಹಾಸ್ಯ ನಾಟಕ ‘ಬಸ್ ಕಂಡಕ್ಟರ್’ ಮನರಂಜಿಸಿತು.
ವಿಜೇತರು: ರಾಜ್ಯ ಮಟ್ಟದ ಪೌರಾಣಿಕ ರಂಗಗೀತಗಾಯನ ಸ್ಪರ್ಧೆಯಲ್ಲಿ ಚಂದ್ರಶೇಖರ್ (ಚಾಮರಾಜನಗರ) ಪ್ರಥಮ, ನರಸರಾಜಾಚಾರ್ (ಮಾಗಡಿ) ದ್ವಿತೀಯ, ಮಲ್ಲಿಕಾ–ರ್ಜುನ್(ಮದ್ದೂರು) ತೃತೀಯ, ಸುರೇಶ್ (ರಾಮನಗರ), ಶ್ರೀನಿವಾಸ್ (ಬಿಡದಿ) ಸಮಾಧಾನಕರ ಬಹುಮಾನಗಳನ್ನು ಪಡೆದುಕೊಂಡರು. ಕುಮಾರಿ ಹರ್ಷಿಣಿ ಅವರಿಗೆ ಪ್ರೋತ್ಸಾಹ ಬಹುಮಾನ ನೀಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಹಾಲು ಮಹಾಮಂಡಳಿಯ ಉಪನಿರ್ದೇಶಕ ಕೆ.ಎಸ್. ರಂಗೇಗೌಡ, ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್ ಕಾರ್ಯದರ್ಶಿ ಡಾ.ಎಂ. ಬೈರೇಗೌಡ, ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಕೆ. ಗೋಪಾಲ್, ಶ್ರೀ ಕೃಷ್ಣ ಸೇವಾ ಟ್ರಸ್ಟ್ ಅಧ್ಯಕ್ಷ ಕೃಷ್ಣಪ್ಪ, ರಂಗದರ್ಶನ ಪ್ರದರ್ಶನ ಕಲಾ ಕೇಂದ್ರದ ಅಧ್ಯಕ್ಷ ಎಂ. ಚನ್ನಕೇಶವಮೂರ್ತಿ, ಪೌರಾಣಿಕ ರಂಗಗೀತ ಗಾಯನ ಸ್ಪರ್ಧೆ ಸಂಚಾಲಕ ಎಸ್. ರುದ್ರೇಶ್ವರ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.