ADVERTISEMENT

‘ರಾಮನಗರ ಜಿಲ್ಲೆಗೆ ನಾನೇ ಮುಖŀಮಂತ್ರಿ’

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2016, 10:56 IST
Last Updated 10 ಫೆಬ್ರುವರಿ 2016, 10:56 IST

ರಾಮನಗರ :  ನಾನು ಮುಖ್ಯಮಂತ್ರಿ ಆಗದಿದ್ದರೂ, ರಾಮನಗರ ಜಿಲ್ಲೆಗೆ ನಾನೇ ಮುಖ್ಯಮಂತ್ರಿ ಎಂದು ಇಂಧನ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಘೋಷಿಸಿದರು.

ತಾಲ್ಲೂಕಿನ ಬಿಳಗುಂಬ ಗ್ರಾಮದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಯಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಮಂಗಳವಾರ ಮತ ಯಾಚನೆ ನಡೆಸಿದ ಸಂದರ್ಭದಲ್ಲಿ ಅವರು ಮಾತನಾಡಿದರು. ಜಿಲ್ಲಾ ಹಾಗು ತಾಲ್ಲೂಕು ಪಂಚಾಯಿತಿಗಳಲ್ಲಿ ಅಭ್ಯರ್ಥಿಗಳು ನೆಪಮಾತ್ರಕ್ಕೆ, ಡಿ.ಕೆ. ಶಿವಕುಮಾರ್ ಸ್ವತಃ ಸ್ಪರ್ಧಿಸಿದ್ದಾರೆ  ಎಂದು ಭಾವಿಸಿ ಮತದಾರರು ತಮ್ಮ ಪಕ್ಷದವರಿಗೆ  ಮತ ನೀಡುವಂತೆ ಅವರು ಮನವಿ ಮಾಡಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್ ಆಡಳಿತ ಮುಂದುವರೆಯುತ್ತದೆ.  ಆಡಳಿತ ಪಕ್ಷದೊಂದಿಗೆ ಹೊಂದಾಣಿಕೆ ಇದ್ದರೆ ಅಭಿವೃದ್ದಿ ಸಾಧ್ಯ ಎಂದು ಸ್ವತಃ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಹಲವಾರು ಬಾರಿ ಹೇಳಿದ್ದಾರೆ. ಹೀಗಾಗಿ ಅಭಿವೃದ್ದಿಗಾಗಿ ಆಡಳಿತ ಪಕ್ಷವಾದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಿ ಎಂದರು.

ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿ ರಾಮನಗರ ಜಿಲ್ಲೆಯನ್ನು ರೂಪಿಸಿದ್ದು ಬಿಟ್ಟರೆ ಇನ್ಯಾವ ಅಭಿವೃದ್ದಿಯನ್ನು ಮಾಡಲಿಲ್ಲ. ಹಾಲಿ ಶಾಸಕರಾಗಿ ಅವರು ಪ್ರಗತಿ ಪರಿಶೀಲನಾ  ಸಭೆಗಳಲ್ಲೂ ಹಾಜರಾಗುತ್ತಿಲ್ಲ. ಯಾವ ರಾಷ್ಟ್ರೀಯ ಹಬ್ಬಗಳಲ್ಲೂ ಭಾಗವಹಿಸುತ್ತಿಲ್ಲ ಎಂದು ದೂರಿದರು.

ನನಗೆ ಹಾಗೂ ನನ್ನ ಸಹೋದರಿಗೆ ಮತ ನೀಡಿ ಜವಾಬ್ದಾರಿ ಕೊಟ್ಟ ಮೇಲೆ ಜಿಲ್ಲೆಯ ಋಣ ತೀರಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಟಿ.ರಂಗಯ್ಯ, ರೇವಣ್ಣ ಅವರು ಕಾಲದಿಂದಲೂ ಶ್ರೀರಂಗ ಯೋಜನೆ ಕುಂಟುತ್ತಾ ಸಾಗುತ್ತಿತ್ತು. ದೇವೇಗೌಡರು ಪ್ರಧಾನಿ ಆಗಿದ್ದಾಗ, ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಏಕೆ ಯೋಜನೆಯನ್ನು ಜಾರಿಗೆ ತಂದಿಲ್ಲ ಎಂಬುದನ್ನು ಜನರು ಪ್ರಶ್ನಿಸಬೇಕು ಎಂದು ಅವರು ಹೇಳಿದರು.

ಕೆ.ಎಂ.ಎಫ್ ಅಧ್ಯಕ್ಷ ಪಿ.ನಾಗರಾಜ್, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ದಲಿತ ಮುಖಂಡ ರಾ.ಶಿ ದೇವರಾಜು ಮಾತನಾಡಿದರು. ಬಿಹಾರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂಜೀವ್ ಸಿಂಗ್, ವಿಧಾನ ಪರಿಷತ್ತಿನ ಸದಸ್ಯ ಎಸ್.ರವಿ, ಮುಖಂಡರಾದ ಜೇಡರಹಳ್ಳಿ ಕೃಷ್ಣಮೂತರ್ಿ, ಸಿ.ಎನ್.ಆರ್. ವೆಂಕಟೇಶ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.