ಸಾಗರ: ‘ಜಾತಿ ಎನ್ನುವುದು ಆರ್ಥಿಕ, ರಾಜಕೀಯ ಅಸಮಾನತೆಯನ್ನು ಮುಂದುವರಿಸುವ ಚಕ್ರವ್ಯೂಹ. ಇದನ್ನು ಬೇಧಿಸಲು ಮೀಸಲಾತಿಯೇ ಅಸ್ತ್ರ’ ಎಂದು ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಬಿ.ಎಲ್.ರಾಜು ಹೇಳಿದರು.
ತಾಲ್ಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಈಚೆಗೆ ಹಮ್ಮಿಕೊಂಡಿದ್ದ ಅಂಬೇಡ್ಕರ್ ಹಾಗೂ ಬಾಬೂ ಜಗಜೀವನರಾಂ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಧರ್ಮ, ಸಂಸ್ಕೃತಿ ಮನುಷ್ಯರನ್ನು ಒಗ್ಗೂಡಿಸುವ ವಿದ್ಯಮಾನ ಎಂದು ಅಂಬೇಡ್ಕರ್ ಹೇಳಿದ್ದರು. ಆದರೆ ಇಂದು ಅವುಗಳು ಜನಸಮುದಾಯದ ವಿಭಜನೆ ಮಾಡುತ್ತಿವೆ. ಈ ಮೂಲಕ ಹುಟ್ಟಿರುವ ಹಿಂಸಾ ರಾಜಕಾರಣಕ್ಕೆ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ಸಮುದಾಯದವರನ್ನು ಕಾಲಾಳುಗಳಂತೆ ಬಳಸಲಾಗುತ್ತಿದೆ’ ಎಂದರು.
‘ಸರ್ಕಾರಿ ನೌಕರರಿಗೆ ಸೌಲಭ್ಯಗಳನ್ನು ಒದಗಿಸಿದ್ದು ಯಾವುದೇ ಮಠಾಧಿಪತಿಗಳಲ್ಲ, ಧರ್ಮಗ್ರಂಥಗಳಲ್ಲ ಹಾಗೂ ರಾಜಕಾರಣಿಗಳಲ್ಲ. ಅಂಬೇಡ್ಕರ್ ಜಾರಿಗೆ ತಂದ ಸಂವಿಧಾನವೇ ಎಲ್ಲರ ಏಳಿಗೆಗೆ ಪ್ರಮುಖ ಕಾರಣ. ದಲಿತವರ್ಗದವರು ಮಾತ್ರ ಸಂವಿಧಾನದ ಸವಲತ್ತು ಪಡೆದಿಲ್ಲ.
ಮೀಸಲಾತಿ ಸೌಲಭ್ಯವನ್ನು ಎಲ್ಲರೂ ಪಡೆದಿದ್ದಾರೆ. ಹೀಗೆ ಸವಲತ್ತು ಪಡೆದವರು ಅಂಬೇಡ್ಕರ್ ಅವರನ್ನು ನೆನಪು ಮಾಡಿಕೊಳ್ಳುತ್ತಿಲ್ಲ. ಸೌಲಭ್ಯ ಪಡೆದವರು ಅಂಬೇಡ್ಕರ್ ಅವರ ದಿನಾಚರಣೆಯನ್ನು ಮನೆಯ ಹಬ್ಬದಂತೆ ಆಚರಿಸಬೇಕು’ ಎಂದು ತಿಳಿಸಿದರು.
ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಜಗದೀಶ್ ಎ.ಬಿ. ಮಾತನಾಡಿ ‘ಸಮಾಜ ಕಲ್ಯಾಣ ಸಚಿವರಾಗಿ, ಕಾರ್ಮಿಕ ಸಚಿವರಾಗಿ, ಉಪ ಪ್ರಧಾನಿಯಾಗಿ ಬಾಬೂಜಿ ಅವರು ಮಾಡಿದ ಕೆಲಸ ಅನುಕರಣೀಯ’ ಎಂದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಕಾರ್ಯಕ್ರಮ ಉದ್ಘಾಟಿಸಿದರು.
ನಗರಸಭೆ ಅಧ್ಯಕ್ಷೆ ಉಷಾ ಎನ್. ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಸದಸ್ಯ ರಾಜಶೇಖರ ಗಾಳಿಪುರ, ತಾಲ್ಲೂಕು ಪಂಚಾಯ್ತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಅಶೋಕ ಬರದವಳ್ಳಿ, ಉಪವಿಭಾಗಾಧಿಕಾರಿ ನಾಗರಾಜ್ ಆರ್. ಸಿಂಗ್ರೇರ್, ತಹಶೀಲ್ದಾರ್ ತುಷಾರ ಬಿ. ಹೊಸೂರು, ಪೌರಾಯುಕ್ತ ಎಸ್.ರಾಜು, ಸಿದ್ದಲಿಂಗಯ್ಯ ಇದ್ದರು.