ಕೋಣಂದೂರು: ‘ಪ್ರತಿಯೊಬ್ಬರ ದೈನಂದಿನ ವ್ಯವಹಾರಗಳು ಪ್ರಾರಂಭವಾಗುವುದೇ ಸೂರ್ಯೋದಯದ ನಂತರ. ಸೂರ್ಯ ತನ್ನ ಪಥವನ್ನು ಬದಲಿಸಿ, ಮನುಕುಲಕ್ಕೆ ಒಳಿತನ್ನುಂಟು ಮಾಡುವ ಸಂಕ್ರಮಣ ಕಾಲವೇ ಸಂಕ್ರಾಂತಿ’ ಎಂದು ಆನಂದಪುರದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಇಲ್ಲಿನ ಬೃಹನ್ಮಠದಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ಶಿವಲಿಂಗ ಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಸೂರ್ಯೋದಯದ ಸಂದರ್ಭ ಆಹ್ಲಾದಕರ ವಾತಾವರಣ ಇರುತ್ತದೆ. ಸೂರ್ಯಾಸ್ತ ದಣಿವು, ಮಂದಮತಿಯ ಪ್ರತಿಬಿಂಬ’ ಎಂದರು.
ಶಿಕಾರಿಪುರದ ಬಳ್ಳಿಗಾವಿಯಲ್ಲಿ ಉಪ್ಪಿನಕಾಯಿ ಉದ್ಯಮ ನಡೆಸುತ್ತಿರುವ ವಸಂತಮ್ಮ ಲಕ್ಷ್ಮಣ ಶ್ರೇಷ್ಠಿ ದಂಪತಿಗೆ ಮಠದಿಂದ ‘ಶಿವಲಿಂಗ ಶ್ರೀ’ಪ್ರಶಸ್ತಿ ಪ್ರದಾನ ಮಾಡಲಾಯಿತು. ದಿನಚರಿ, ದಿನದರ್ಶಿಕಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ಬೃಹನ್ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮರುಳ ಸಿದ್ದಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಶಿವಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ, ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ರಾಜ ಗುರೂಜಿ ನಿರಂಜನ ಚರಮೂರ್ತಿ ಸ್ವಾಮೀಜಿ, ಆಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ನಾಗಭೂಷಣ ಶಿವಾಚಾರ್ಯ ಸ್ವಾಮಿಜಿ ಮಾತನಾಡಿದರು.
ಮಾಜಿ ಶಾಸಕ ಆರಗ ಜ್ಞಾನೇಂದ್ರ, ಜಿಲ್ಲಾ ಪಂಚಾಯ್ತಿ ಸದಸ್ಯೆ ಅಪೂರ್ವಾ ಶರಧಿ ಪೂರ್ಣೇಶ್, ಕೆ.ಆರ್.ಪ್ರಕಾಶ್ ಉಪಸ್ಥಿತರಿದ್ದರು. ನಂತರ ಕವಿ ಗೋಷ್ಠಿ ನಡೆಯಿತು. ಚಂದ್ರಕಲಾ ಪ್ರಾರ್ಥಿಸಿದರು. ಹಾಲಪ್ಪಗೌಡ ಸ್ವಾಗತಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.