ADVERTISEMENT

ಗ್ರಾಮಾಭಿವೃದ್ಧಿಗೆ ಹೈನುಗಾರಿಕೆ ಸಹಕಾರಿ

ಪಶುವೈದ್ಯ ಇಲಾಖೆ ಸಹಾಯಕ ನಿರ್ದೇಶಕ ರಂಗಸ್ವಾಮಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 8:36 IST
Last Updated 10 ಜನವರಿ 2017, 8:36 IST
ಆನವಟ್ಟಿ: ಗ್ರಾಮಾಂತರ ಪ್ರದೇಶಗಳಲ್ಲಿ ಹೈನುಗಾರಿಕೆಗೆ ಪೂರಕ ವಾತಾವರಣ ವಿದ್ದು, ಜನರು ಹೈನುಗಾರಿಕೆಯಲ್ಲಿ ಹೆಚ್ಚು ತೊಡಗಿಕೊಳ್ಳುವುದರಿಂದ ಆರ್ಥಿಕತೆ ಸುಧಾರಿಸುತ್ತದೆ ಎಂದು ಸೊರಬದ ಪಶುವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎನ್.ರಂಗಸ್ವಾಮಿ ಸಲಹೆ ನೀಡಿದರು.
 
ಕೋಡಿಹಳ್ಳಿ ಗ್ರಾಮದಲ್ಲಿ ಹೋಪ್ ಫೌಂಡೇಶನ್ ಅಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ, ಜಾನುವಾರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಹಾಗೂ ಜಾನುವಾರು ಸಾಕಾಣಿಕೆ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
 
ಜಾನುವಾರು ಆಹಾರಕ್ಕಾಗಿ ಸರ್ಕಾರ ಸೌಲಭ್ಯ ಒದಗಿಸುತ್ತಿದೆ. ಸಮರ್ಪಕವಾಗಿ  ಪಲಾನುಭವಿಗಳಿಗೆ ಹಂಚಿಕೆ ಮಾಡಬೇಕು ಎಂದು ಪಶು ವೈದ್ಯಾಧಿಕಾರಿಗೆ ನಿರ್ದೇಶನ ನೀಡಿದರು. 
 
ಪಶು ವೈದ್ಯಾಧಿಕಾರಿ ತೋಕಪ್ಪ ಮಾತನಾಡಿ, ‘ರೈತರು ಹೆಚ್ಚು ಜಾನುವಾರು ಸಾಕಾಣಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಸಗಣಿ ಉತ್ತಮ ಗೊಬ್ಬರವಾಗಿದ್ದು. ಜಮೀನುಗಳಲ್ಲಿ ಬಳಸಿ ಉತ್ತಮ ಬೆಳೆ ತೆಗೆಯಲು ಸಾಧ್ಯ. ಸಾವಯವ ಗೊಬ್ಬರ ಕೃಷಿ ಭೂಮಿಗೆ ಅಗತ್ಯವಾಗಿದ್ದು, ಭೂಮಿ ಬರಡಾಗುವುದನ್ನು ತಡೆಯಲು ಸಹಕಾರಿ ಎಂದು ಸಲಹೆ ನೀಡಿದರು.
 
ಉತ್ತಮ ತಳಿಯ ಆಯ್ಕೆ: ಹೈನುಗಾರಿಕೆಗೆ ಮೊದಲು ಉತ್ತಮ ಮಿಶ್ರತಳಿ ಅಥವಾ ದೇಶಿಯ ತಳಿಗಳಲ್ಲಿ ಹೆಚ್ಚು ಹಾಲು ನೀಡುವ ಹಸುಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಹೆಚ್ಚು ಲಾಭ ಪಡೆಯಲು ಸಾಧ್ಯ ಎಂದರು.
 
ಹಸುಗಳಿಗೆ ಗರ್ಭಾವಸ್ಥೆಯಲ್ಲಿ ಟ್ಯೂಬ್ ಹಾಕಿಸುವುದರಿಂದ ಹುಟ್ಟುವ ಕರುಗಳು ಸಧೃಡವಾಗಿರುತ್ತವೆ ಮತ್ತು ಆರೋಗ್ಯಕರವಾಗಿ ಬೆಳವಣಿಗೆ ಆಗುತ್ತವೆ ಎಂದು ಸಲಹೆ ನೀಡಿದರು.
 
ಸಗಣಿ, ಗಂಜಲ ಸರಾಗವಾಗಿ ಹೊರಗೆ ಹೋಗುವಂತೆ ಎತ್ತರವಾಗಿ ನೆಲಮಟ್ಟದ ನಿರ್ಮಾಣ ಮಾಡಬೇಕು. ಹೆಚ್ಚು ಗಲೀಜು ಇದ್ದರೆ ಕೆಚ್ಚಲುಬಾವು ರೋಗ ಬರಬಹುದು. ಜಾನುವಾರು ಸ್ವಚ್ಛತೆ ಜತೆಗೆ ಕೊಟ್ಟಿಗೆ ಸ್ವಚ್ಛತೆಯೂ ಮುಖ್ಯ ಎಂದರು.
 
ತೌಡು, ಹುಲ್ಲು ಮುಂತಾದ ಆಹಾರ ಮಿಶ್ರಣ ಬಳಸಿ ಗುಣಮಟ್ಟದ ಆಹಾರ ಪದಾರ್ಥ ತಯಾರಿಕೊಳ್ಳಬಹುದು. ಪಶು ಇಲಾಖೆಯೊಂದಿಗೆ ಸಂಪರ್ಕದಲ್ಲಿದ್ದು ಹೆಚ್ಚಿನ ಮಾಹಿತಿ ಪಡೆದುಕೊಳ್ಳುವಂತೆ  ತಿಳಿಸಿದರು.
 
ಹೋಪ್ ಫೌಂಡೇಶನ್ ಅಧ್ಯಕ್ಷ ಎ.ಎಸ್.ಹರ್ಷ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪಾಧ್ಯಕ್ಷ ಕೆ.ಎನ್. ಹರ್ಷದ್, ಖಜಾಂಚಿ ವಕೀಲ ಮಹೇಂದ್ರ ಕುಮಾರ, ಸದಸ್ಯರಾದ ಕೆ.ಬಿ. ಮಂಜುನಾಥ, ಕಿರಣಕುಮಾರ, ಸುರೇಶ, ವಂಸತ, ಪಶುವೈದ್ಯಾಧಿಕಾರಿ ಎನ್.ಆರ್.ಪ್ರದೀಪ್ ಕುಮಾರ್ ಆನವಟ್ಟಿ, ಜಗದೀಶ್ ಕುಮಾರ್ ತವನಂದಿ ಮತ್ತು ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.