ಕಾರ್ಗಲ್: ಶರಾವತಿ ನದಿ ತೀರದಲ್ಲಿ ನೆಲೆಸಿರುವ ಕಣಿವೆಯ ಶಕ್ತಿ ದೇವತೆ ಶ್ರೀ ಚೌಡೇಶ್ವರಿ ದೇಗುಲದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಸೆ.21ರಿಂದ ಸೆ.30ರವರೆಗೆ ನವರಾತ್ರಿ ಉತ್ಸವವನ್ನು ಅತ್ಯಂತ ವೈಭವದಿಂದ ಆಚರಿಸಲು ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಕ್ಷೇತ್ರದ ಧರ್ಮದರ್ಶಿ ವಿನೋದ ಮಹಾಲೆ ತಿಳಿಸಿದರು.
ಇಲ್ಲಿನ ಚೌಡೇಶ್ವರಿ ಮಹಾಲಸಾ ದೇವಸ್ಥಾನದಲ್ಲಿ ಉತ್ಸವದ ಅಂಗವಾಗಿ ಕೈಗೊಳ್ಳಲಾಗಿರುವ ಸಿದ್ಧತೆಗಳನ್ನು ಪರಿಶೀಲಿಸಿ ಅವರು ಮಾತನಾಡಿದರು. ನವರಾತ್ರಿ ಉತ್ಸವ ಕಾಲದಲ್ಲಿ ಕ್ಷೇತ್ರ ದೈವಗಳ ಸನ್ನಿಧಿಯಲ್ಲಿ ಸಪ್ತಶತಿ ಪಾರಾಯಣ, ಲಲಿತಾಷ್ಟೋತ್ತರ , ಕುಂಕುಮಾರ್ಚನೆ ಮತ್ತು ವಿಶೇಷ ಪುಷ್ಪಲಂಕಾರ ಸೇವೆಗಳನ್ನು ನೆರವೇರಿಸಲಾಗುವುದು.
ಪ್ರತಿ ಶುಕ್ರವಾರ ದೇವಾಲಯಕ್ಕೆ ಬರುವ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಗುತ್ತಿದೆ. ಸೆ.24ರಂದು ಮತ್ತು ಸೆ.30ರಂದು ವಿಜಯದಶಮಿ ಪ್ರಯುಕ್ತ ಮಧ್ಯಾಹ್ನ ವಿಶೇಷ ದರ್ಶನ, ಮಹಾಮಂಗಳಾರತಿ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
28ರಂದು ದುರ್ಗಾಷ್ಟಮಿ ಅಂಗವಾಗಿ ಪಾರಂಪರಿಕವಾಗಿ ನಡೆದು ಬಂದಿರುವ ದುರ್ಗಾ ನಮಸ್ಕಾರ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಶ್ರೀ ಚೌಡೇಶ್ವರಿ ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀನಿವಾಸ.ಎಂ.ಪೈ ಮಾತನಾಡಿ, ‘ದರ್ಶನ ಪಾತ್ರಿಗಳೂ ಆಗಿರುವ ವಿನೋದ ಮಹಾಲೆ ಅವರ ಮೂಲಕ ರಾಜ್ಯದ ಮತ್ತು ಹೊರರಾಜ್ಯಗಳ ಅನೇಕರು ತಮ್ಮ ಕಷ್ಟ–ನಷ್ಟಗಳಿಗೆ ಪರಿಹಾರ ಸೂತ್ರವನ್ನು ಪ್ರತೀ ಶುಕ್ರವಾರದ ದರ್ಶನದಲ್ಲಿ ಕಂಡುಕೊಳ್ಳುತ್ತಿದ್ದಾರೆ.
ಭಕ್ತರಿಗೆ ಮೂಲಸೌಕರ್ಯದ ಸಿದ್ಧತೆ ಮಾಡಲಾಗಿದೆ. ಶರಾವತಿ ನದಿ ತೀರದಲ್ಲಿ ಪುಣ್ಯಸ್ನಾನ ಮುಗಿಸಿ ಬರುವ ಭಕ್ತರ ಕೋರಿಕೆ ಮೇರೆಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ. ಉತ್ಸವ ಕಾಲದಲ್ಲಿ ಪ್ರತಿ ಸಂಜೆ ನಾಡಿನ ಬೇರೆ ಬೇರೆಡೆಯಿಂದ ಬರುವ ಭಕ್ತ ಮಂಡಲಗಳಿಂದ ವಿವಿಧ ಸಾಂಸ್ಕೃತಿಕ ಹಾಗೂ ಭಜನಾ ಕಾರ್ಯಕ್ರಮಗಳನ್ನು ನಡೆಸಲಾಗುವುದು’ ಎಂದು ತಿಳಿಸಿದರು. ಧರ್ಮದರ್ಶಿ ಮಂಡಲದ ಶಿವಾನಂದ ಪ್ರಭು, ಜಯಂತಿ.ಎಸ್.ಮಹಾಲೆ, ಅಜಿತ್ ಮಹಾಲೆ, ಪ್ರವೀಣ್ ಮಹಾಲೆ, ಮೋಹನ್.ಎಂ.ಪೈ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.