ಸಾಗರ: ‘12ನೇ ಶತಮಾನದ ವಚನ ಕಾರರಲ್ಲಿ ಸಿದ್ಧರಾಮೇಶ್ವರ ಅವರು ಮುಂಚೂಣಿಯಲ್ಲಿದ್ದು, ಮಲ್ಲಿನಾಥ ನಾಮಾಂಕಿತದಿಂದ ಸಿದ್ದರಾಮೇಶ್ವರರು ಬರೆದ ವಚನಗಳು ನೈಜ ಬದುಕಿಗೆ ತೀರ ಹತ್ತಿರವಾಗಿದೆ’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಜಿ.ಪರಮೇಶ್ವರಪ್ಪ ತಿಳಿಸಿದರು.
ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ತಾಲ್ಲೂಕು ಆಡಳಿತದ ವತಿಯಿಂದ ಸಿದ್ಧರಾಮೇಶ್ವರರ 844ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡುತ್ತಿದ್ದರು. ‘ಸಿದ್ದರಾಮೇಶ್ವರರು 68 ಸಾವಿರಕ್ಕೂ ಹೆಚ್ಚಿನ ವಚನಗಳನ್ನು ಬರೆದಿದ್ದರೂ, ಅಧಿಕೃತವಾಗಿ ದೊರೆತಿರುವುದು 1,379 ವಚನಗಳು ಮಾತ್ರ. ಆಧ್ಯಾತ್ಮಿಕ, ಮನುಷ್ಯ ಬದುಕಿನ ಸಂಬಂಧ, ಸಾಮರಸ್ಯದ ಬಾಳ್ವೆ ಇನ್ನಿತರೆ ವಿಷಯಗಳ ಮೇಲೆ ಸಿದ್ಧರಾಮೇಶ್ವರರ ವಚನಗಳು ನಿಂತಿದೆ. ಕವಿ ರಾಘವಾಂಕ ರಚಿಸಿದ ಕಾವ್ಯದಲ್ಲಿ ಸಿದ್ಧರಾಮೇಶ್ವರರ ಪುರಾಣ ದಾಖಲಾಗಿವೆ’ ಎಂದರು.
‘ಕೆರೆಗಳ ನಿರ್ಮಾಣ, ಸಾಮೂಹಿಕ ವಿವಾಹ ಹಾಗೂ ಸಮಾನತೆಯನ್ನು ಸಿದ್ಧರಾಮೇಶ್ವರರು ಪ್ರತಿಪಾದಿಸಿದ್ದಾರೆ. ಅದರಲ್ಲಿಯೂ ಅಂತರ್ಜಾತಿ ವಿವಾಹದ ಬಗ್ಗೆ ಹೆಚ್ಚಿನ ನಂಬಿಕೆ ಹೊಂದಿದ್ದ ಅವರು ಅದಕ್ಕೆ ಪ್ರೋತ್ಸಾಹ ಸಹ ನೀಡಿಕೊಂಡು ಬಂದಿದ್ದರು.
ಅವರ ವಚನಗಳು, ಅವರ ಬದುಕಿನ ಕುರಿತು ಇನ್ನಷ್ಟು ಚರ್ಚೆ ನಡೆಯುವ ಅಗತ್ಯವಿದೆ’ ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ‘ನಮ್ಮ ನಡುವಿನ ದಾರ್ಶನಿಕರ ಬದುಕಿನ ರೀತಿ ನಮಗೆ ಆದರ್ಶವಾಗಬೇಕು.
ವಚನ ಕಾರರು, ಕಾಯಕಯೋಗಿಯಾಗಿದ್ದ ಸಿದ್ಧರಾಮೇಶ್ವರ ಅವರ ವಚನಗಳು ಬದುಕಿನ ಕಣ್ಣನ್ನು ತೆರೆಸುವಂತಹದ್ದು. ದಾರ್ಶನಿಕರನ್ನು ಜಾತಿ ಜನಾಂಗಕ್ಕೆ ಸೀಮಿತ ಮಾಡದೆ, ಅವರ ಜಯಂತಿ ಯಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳು ವಂತೆ ಆಗಬೇಕು’ ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷೆ ಉಷಾ ಎನ್. ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಹಶೀಲ್ದಾರ್ ತುಷಾರ್ ಬಿ. ಹೊಸೂರು, ಪೌರಾಯುಕ್ತ ಬಿ.ಎನ್.ಚಂದ್ರಶೇಖರ್, ತಾಲ್ಲೂಕು ಭೋವಿ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎಲ್.ಚಂದ್ರಪ್ಪ, ನಗರಸಭೆ ಸದಸ್ಯರಾದ ಕೆ.ಸಿದ್ದಪ್ಪ, ನಂದಾ ಗೊಜನೂರು, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಕೆ.ಪಿ.ಅಚ್ಚುತ್, ವೃತ್ತ ನಿರೀಕ್ಷಕ ಬಿ.ಎಲ್.ಜನಾರ್ದನ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಮಪ್ಪ ಇನ್ನಿತರರು ಹಾಜರಿದ್ದರು. ಮೋಹನ್ ಪ್ರಾರ್ಥಿಸಿದರು. ಪಿ.ಲಿಂಗಪ್ಪ ಸ್ವಾಗತಿಸಿದರು. ಕಲ್ಲಪ್ಪ ಮೆಣಸಿನಾಳ್ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.