ADVERTISEMENT

ನೀರಿನ ಬಳಕೆ ಕಂದಾಯ ಏರಿಕೆ

​ಪ್ರಜಾವಾಣಿ ವಾರ್ತೆ
Published 17 ಮೇ 2017, 5:22 IST
Last Updated 17 ಮೇ 2017, 5:22 IST

ಶಿಕಾರಿಪುರ: ಕುಡಿಯುವ ನೀರು ಬಳಕೆ ಕಂದಾಯವನ್ನು ಏರಿಕೆ ಮಾಡುವ ನಿರ್ಣಯಕ್ಕೆ ಪುರಸಭೆ ಸದಸ್ಯರು ಒಪ್ಪಿಗೆ ನೀಡಿದರು. ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ  ಕೈಗೊಳ್ಳಲಾಯಿತು.  

ಕುಡಿಯುವ ನೀರು ಬಳಕೆ ಮೇಲಿನ ಕಂದಾಯವನ್ನು ಗೃಹ ಬಳಕೆಗೆ ದರ ₹ 80ರಿಂದ ₹ 110ಕ್ಕೆ ಏರಿಕೆ ಮಾಡ ಲಾಗಿದ್ದು, ಗೃಹಯೇತರ ಬಳಕೆಗೆ ₹ 160 ರಿಂದ ₹ 200,  ವಾಣಿಜ್ಯ ಉದ್ದೇಶಕ್ಕೆ ₹ 320 ರಿಂದ ₹ 500ಕ್ಕೆ ಏರಿಕೆ ಮಾಡಲಾಗಿದೆ.

ಅಂಜನಾಪುರ ಜಲಾಶಯದಿಂದ ಪಟ್ಟಣಕ್ಕೆ ಕುಡಿಯುವ ನೀರು ಸಗಟು ನಿರ್ವಹಣೆಯನ್ನು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅವರಿಗೆ ವಹಿಸಲಾಯಿತು.
ಬಸ್‌ನಿಲ್ದಾಣ ಸೇರಿದಂತೆ ಜನಸಂದಣಿ ಪ್ರದೇಶದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳು ಗಮನ ಹರಿಸಬೇಕು ಎಂದು ಸದಸ್ಯ ಭದ್ರಾಪುರ ಫಾಲಾಕ್ಷ ಮನವಿ ಮಾಡಿದರು.

ADVERTISEMENT

ಮುಖ್ಯಾಧಿಕಾರಿ ಬಾಲಾಜಿರಾವ್‌ ಪ್ರತಿಕ್ರಿಯಿಸಿ, ಬಸ್‌ ನಿಲ್ದಾಣ ಸಮೀಪ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲು ಸ್ಥಳ ನಿಗದಿಪಡಿಸಲಾಗಿದೆ ಎಂದರು. ಸದಸ್ಯ ಬಿ. ಯಲ್ಲಪ್ಪ ಮಾತನಾಡಿ, ಎಸ್‌ಸಿಎಸ್‌ಪಿ ಟಿಎಸ್‌ಪಿ ಯೋಜನೆಯಡಿ ಪುರಸಭೆಗೆ ದೊರೆತ ₹ 5ಕೋಟಿ ಅನುದಾನ ಕುರಿತು ಸಾಮಾನ್ಯ ಸಭೆ ಕಾರ್ಯಸೂಚಿಯಲ್ಲಿ ಸೇರ್ಪಡೆ ಯಾಗಲಿಲ್ಲ ಏಕೆ ಎಂದು  ಪ್ರಶ್ನಿಸಿದರು.

ಈ ಯೋಜನೆ ಹಣ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಜನರು ವಾಸಿಸುವ ಬಡಾವಣೆ ಅಭಿವೃದ್ಧಿಗೆ ವಿನಿ ಯೋಗಿಸಬೇಕು ಎಂದು ಒತ್ತಾಯಿಸಿದರು.  ಪುರಸಭೆ ಉಪಾಧ್ಯಕ್ಷೆ ಫೈರೋಜಾಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್‌.ಪಿ. ನಾಗರಾಜಗೌಡ, ಸದಸ್ಯರಾದ ಗೋಣಿ ಮಾಲತೇಶ್‌, ಟಿ.ಎಸ್‌. ಮೋಹನ್‌, ಚಾರಗಲ್ಲಿ ಪರಶುರಾಮ್‌, ಎಂ.ಎಚ್‌. ರವೀಂದ್ರ, ಮಧುಸೂದನ್‌, ಅಂಗಡಿ ಜಗದೀಶ್‌, ಪಾರ್ವತಮ್ಮ, ವೀಣಾ ವಿಜಯ ಕುಮಾರ್‌, ಪದ್ಮಾ ಗಜೇಂದ್ರ, ನಾಮ ನಿರ್ದೇಶಿತ ಸದಸ್ಯರಾದ ಫಯಾಜ್‌್ ಅಹಮದ್‌, ಜೈಸು ಸುರೇಶ್‌, ಬಡಗಿ ಫಾಲಾಕ್ಷ, ಪುರಸಭೆ ಆರೋಗ್ಯ ನಿರೀಕ್ಷಕ ರಾಜಕುಮಾರ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.