ADVERTISEMENT

ಬೇಡಿಕೆಗಳ ಪಟ್ಟಿ ಮುಂದಿಟ್ಟ ನಾಗರಿಕರು

ತೀರ್ಥಹಳ್ಳಿ: ಪಟ್ಟಣ ಪಂಚಾಯ್ತಿ ಆಯವ್ಯಯ ಸಭೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2015, 6:05 IST
Last Updated 30 ಜನವರಿ 2015, 6:05 IST

ತೀರ್ಥಹಳ್ಳಿ: ಇಲ್ಲಿನ ಪಟ್ಟಣ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ 2015–16ನೇ ಸಾಲಿನ ಆಯವ್ಯಯ ಕುರಿತು ಪಟ್ಟಣ ಪಂಚಾಯ್ತಿ ಅಧ್ಯಕ್ಷ ಸೊಪ್ಪುಗುಡ್ಡೆ ರಾಘವೇಂದ್ರ ಅವರ ಅಧ್ಯಕ್ಷತೆಯಲ್ಲಿ ಜನಪ್ರತಿನಿಧಿ, ಸಾರ್ವಜನಿಕರು, ಸಂಘ ಸಂಸ್ಥೆ ಪ್ರತಿನಿಧಿಗಳ ಸಭೆ ನಡೆಯಿತು.

ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ ಡಾ.ಟಿ.ನಾರಾಯಣ ಸ್ವಾಮಿ ಮಾತನಾಡಿ, ಪಟ್ಟಣದ ಆಜಾದ್‌ ರಸ್ತೆ ವಿಸ್ತರಣೆ ಕಾಮಗಾರಿ ಅನುಷ್ಠಾನದ ಸಂದರ್ಭದಲ್ಲಿ ಫುಟ್‌ಪಾತ್‌ ಪ್ರದೇಶದ ಅವಶ್ಯಕತೆಗೆ ಹೆಚ್ಚು ಆದ್ಯತೆ ನೀಡಬೇಕು. ತಾಲ್ಲೂಕು ಕಚೇರಿ ಬಳಿ ಸಾರ್ವಜನಿಕ ಶೌಚಾಲಯ ನಿರ್ಮಾಣವಾಗಬೇಕು. ಪಟ್ಟಣದಲ್ಲಿನ ಉದ್ಯಾನ ನಿರ್ವಹಣೆಗೆ ಹೆಚ್ಚು ಆಸಕ್ತಿ ವಹಿಸಬೇಕು ಎಂದರು.

ಸಂಸ್ಥೆ ಪಕ್ಕದಲ್ಲಿ ಗ್ಯಾರೇಜುಗಳು ಕಾರ್ಯನಿರ್ವಹಿಸುತ್ತಿದ್ದು ಅವುಗಳನ್ನು ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲು ಕೈಗಾರಿಕಾ ಪ್ರದೇಶವನ್ನು ಗುರುತು ಮಾಡಿ ಅಲ್ಲಿಗೆ ಗ್ಯಾರೇಜುಗಳನ್ನು ಸ್ಥಳಾಂತರಿಸಬೇಕಿದೆ. ಪಟ್ಟಣ ಪಂಚಾಯ್ತಿ ಈ ಸಂಬಂಧ ಸಮರ್ಪಕ ಅಂದಾಜು ಕ್ರಮ ರೂಪಿಸಬೇಕು. ವಿದ್ಯುತ್‌ ಸಂಪರ್ಕ  ಕಲ್ಪಿಸಲು ಯುಜಿಡಿ ಯೋಜನೆ ಜಾರಿಗೊಳಿಸಬೇಕು ಎಂದು ತಾಲ್ಲೂಕು ವರ್ತಕರ ಸಂಘದ ಅಧ್ಯಕ್ಷ ಚೈತನ್ಯ ಜವಳಿ ಒತ್ತಾಯಿಸಿದರು.

ಸಾರ್ವಜನಿಕ ಸ್ಥಳದಲ್ಲಿ ಜರ್ದಾ, ಪಾನ್‌ ಮಸಾಲ ಉಗುಳುವುದು, ಬೀಡಿ ಸೀಗರೇಟು ಸೇವನೆ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ. ಉಗುಳು ತೊಟ್ಟಿ, ಧೂಮಪಾನ ಕೊಠಡಿ ನಿರ್ಮಾಣದ ಅಗತ್ಯವಿದೆ ಎಂದು ಡಾ.ಶಿವಪ್ರಕಾಶ್‌ ಮನವಿ ಮಾಡಿದರು.

ತಾಲ್ಲೂಕು ಕಚೇರಿ ಬಳಿಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಪಟ್ಟಣ ಪಂಚಾಯ್ತಿ ಅನುದಾನ ಬಿಡುಗಡೆ ಮಾಡಿದೆ. ಕಂದಾಯ ಇಲಾಖೆ ಸ್ಥಳ ಗುರುತಿಸಿದ್ದು, ತಕ್ಷಣ ಕಾಮಗಾರಿ ಆರಂಭಿಸಲಾಗುತ್ತದೆ. ಅತ್ಯಾಧುನಿಕ ಶೌಚಾಲಯ ನಿರ್ಮಾಣವಾಗಲಿದೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಸೊಪ್ಪುಗುಡ್ಡೆ ರಾಘವೇಂದ್ರ ಹೇಳಿದರು.

ಸಭೆಯಲ್ಲಿ ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷೆ  ಲಕ್ಷ್ಮಿ ವೆಂಕಟಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಸಂದೇಶ್‌ ಜವಳಿ, ಸದಸ್ಯರಾದ ರಹಮತ್‌ ಉಲ್ಲಾ ಅಸಾದಿ, ನವೀನ್‌ ಕುಮಾರ್‌, ವೆಂಕಟೇಶ್‌ ಪಟವರ್ದನ್‌, ಸವಿತಾ ಶೆಟ್ಟಿ, ರಾಜೀವನ್‌, ನಯನಾ ಶೆಟ್ಟಿ, ಗೀತಾ, ಶಬನಮ್‌, ಮುಖ್ಯಾಧಿಕಾರಿ ನಾಗೇಂದ್ರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.