ADVERTISEMENT

ರಂಗಾಯಣದ ಅಂಗಳದಲ್ಲಿ ಚಿಲಿಪಿಲಿ ಕಲರವ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 4:06 IST
Last Updated 17 ಏಪ್ರಿಲ್ 2017, 4:06 IST
ಶಿವಮೊಗ್ಗ: ಸುವರ್ಣ ಸಂಸ್ಕೃತಿ ಭವನದಲ್ಲಿ ರಂಗಾಯಣ ಈ ವರ್ಷವೂ ಮಕ್ಕಳ ಬೇಸಿಗೆ ಶಿಬಿರ ‘ಚಿಲಿಪಿಲಿ’ ಆಯೋಜಿಸಿದೆ. ಇಲ್ಲಿ ನಡೆಯುವ ಬೇಸಿಗೆ ಶಿಬಿರ ಮಕ್ಕಳಿಗೆ ವಿಶಿಷ್ಟ ರೀತಿಯ ಅನುಭವ ಕಟ್ಟಿಕೊಡುತ್ತಿದೆ. 
 
ಕಳೆದ ವರ್ಷ ಶಿಬಿರದಲ್ಲಿ ಕೇವಲ ನಾಟಕಗಳಿಗೆ ಒತ್ತು ನೀಡಲಾಗಿತ್ತು. ಆದರೆ, ಈ ಬಾರಿ ಶಿಬಿರದಲ್ಲಿ ಹಲವು ರೀತಿಯ ಚಟುವಟಿಕೆ ಹಮ್ಮಿಕೊಳ್ಳ ಲಾಗಿದೆ. 
ಶಿಬಿರದಲ್ಲಿ ಸಂಗೀತ, ಮಣ್ಣಿನ ಕಲಾಕೃತಿ, ಮುಖವಾಡ ತಯಾರಿಸುವುದು, ಪೇಪರ್‌ ಕಟ್ಟಿಂಗ್‌, ರಂಗಾಟಗಳು, ಚಿತ್ರಕಲೆ, ಗಾಳಿಪಟ ತಯಾರಿಕೆ ಕಲಿಸಲಾಗುತ್ತಿದೆ.
 
ಪ್ರಸಾದನ ಪರಿಚಯ, ಪರಿಸರ ಕುರಿತು ಜಾಗೃತಿ ಮೂಡಿಸುವ ತರಗತಿಗಳು, ಕಥೆ, ಕವನ ಹೇಗೆ ವಾಚನ ಮಾಡಬೇಕು ಎಂಬುದರ ಕುರಿತು. ನಾಟಕ, ಮಕ್ಕಳ ಚಲನಚಿತ್ರ ಪ್ರದರ್ಶನ, ರಕ್ಷಣಾ ಕಲೆಯ ಪರಿಚಯ ವಿಶೇಷವಾಗಿ ಹೇಳಿ ಕೊಡಲಾಗುತ್ತದೆ.
 
ಶಿಬಿರದಲ್ಲಿ 6 ರಿಂದ 16 ವರ್ಷದ ಒಟ್ಟು 240 ಮಕ್ಕಳಿದ್ದಾರೆ. ಶಿಬಿರದ ಶುಲ್ಕ ₹ 1,500 ನಿಗದಿ ಮಾಡಲಾಗಿದೆ. ಮಾದವನೆಲೆ, ಅಲೆಮಾರಿ ಜನಾಂಗ, ಹಕ್ಕಿಪಿಕ್ಕಿ ಕ್ಯಾಂಪ್‌ನ ಮಕ್ಕಳಿಗೆ ಉಚಿತ ಪ್ರವೇಶ ನೀಡಲಾಗಿದೆ. ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಶಿಬಿರ ನಡೆಯುತ್ತದೆ.
 
ಶಿಬಿರದಲ್ಲಿ ಸಹ್ಯಾದ್ರಿ, ಚಾರ್ಮಾಡಿ, ಕೊಡಚಾದ್ರಿ, ಆಗುಂಬೆ ಹೆಸರಿನ ನಾಲ್ಕು ತಂಡಗಳಾಗಿ ವಿಂಗಡಿಸಲಾಗಿದೆ. ಒಂದು ತಂಡದಲ್ಲಿ 40ರಿಂದ 50 ಮಕ್ಕಳಿದ್ದಾರೆ. ಒಂದು ತಂಡಕ್ಕೆ ಇಬ್ಬರು ನಿರ್ದೇಶಕರನ್ನು ನಿಯೋಜಿಸಲಾಗಿದೆ. ಈ ಎಲ್ಲ ತಂಡಗಳ ಉಸ್ತುವಾರಿ ಶಿಬಿರದ ನಿರ್ದೇಶಕರು ನಿರ್ವಹಿಸುತ್ತಿದ್ದಾರೆ. ಎಲ್ಲ ವಯೋ ಮಾನದ   ಮಕ್ಕಳಿಗೂ ಕಲಿಕೆಯಲ್ಲಿ ಸಮಾನ ಆದ್ಯತೆ ನೀಡಲಾಗಿದೆ.
 
ರಂಗಾಯಣ, ನಿನಾಸಂನ ಕಲಾವಿದರು ಮಕ್ಕಳಿಗೆ ಶಿಬಿರದಲ್ಲಿ ಉತ್ತಮ ತರಬೇತಿ ನೀಡುತ್ತಿದ್ದಾರೆ. ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಶಿಶು ಗೀತೆ, ನೃತ್ಯ, ಪೇಪರ್‌ ಕಟ್ಟಿಂಗ್‌, ನಾಟಕ. ಮೈಮ್‌ ಹೇಳಿಕೊಡಲಾಗುತ್ತಿದೆ.
 
ಶಿಬಿರದ ಕೊನೆಯ ದಿನ ‘ಚಿಣ್ಣರ ಸಂತೆ’ ಆಯೋಜಿಸಲಾಗಿದೆ. ಈ ಸಂತೆಯಲ್ಲಿ ಮಕ್ಕಳು ತಾವೇ ತಯಾರಿಸಿದ ವಸ್ತುಗಳ ಮಾರಾಟ ಮಾಡುತ್ತಾರೆ. ಮಕ್ಕಳ ವ್ಯವಹಾರ ಜ್ಞಾನ ಹೆಚ್ಚಳಕ್ಕೆ ಈ ಸಂತೆ ಪ್ರಯೋಜನವಾಗಲಿದೆ.
 
ಶಿಬಿರದ ಸಮಾರೋಪದಲ್ಲಿ ಮಕ್ಕಳ ಅಭಿನಯದ ನಾಟಕ ಪ್ರದರ್ಶನ, ಶ್ವಾನ ಪ್ರದರ್ಶನ, ಅಗ್ನಿ ಶಾಮಕ ದಳದಿಂದ ಪ್ರಾತ್ಯಕ್ಷಿತೆ ಮತ್ತು ಮಕ್ಕಳಿಗೆ ಓಕುಳಿ ಹಮ್ಮಿಕೊಳ್ಳಲಾಗಿದೆ.
 
‘ಈ ಶಿಬಿರದಲ್ಲಿ ಎಲ್ಲಾ ಚಟುವಟಿಕೆಗಳು ಇಷ್ಟವಾಗಿದೆ. ನೃತ್ಯ, ಚಿತ್ರಕಲೆ, ನಾಟಕಗಳು ನನ್ನ ನೆಚ್ಚಿನ ಚಟುವಟಿಕೆಗಳಾಗಿವೆ’ ಎನ್ನುತ್ತಾರೆ ವಿದ್ಯಾರ್ಥಿನಿ ದಿಶಿತಾ.
‘ತಂಡಗಳನ್ನು ಮಾಡಿ, ನಮಗೆ ಸಂಗೀತ, ಕ್ಲೇ, ಮುಖವಾಡ ತಯಾರಿಕೆಯ ಕಲೆ ಹೇಳಿಕೊಡ ಲಾಗುತ್ತಿದೆ. ಕಳೆದ ವರ್ಷದ ಶಿಬಿರಕ್ಕಿಂತ ಈ ವರ್ಷದ ಶಿಬಿರ ಹೆಚ್ಚು ಸಂತೋಷ ತಂದಿದೆ’ ಎನ್ನುತ್ತಾನೆ ವಿದ್ಯಾರ್ಥಿ ಯಶಸ್.
***
ಮಕ್ಕಳು ಶಿಬಿರದ ಎಲ್ಲಾ ಚಟುವಟಿಕೆಗಳಲ್ಲೂ ಉತ್ಸಾಹದಿಂದ ಭಾಗಿಯಾಗುತ್ತಿದ್ದಾರೆ
–ಮಂಗಳಾ ವೆಂ.ನಾಯಕ್, ಸಹಾಯಕ ನಿರ್ದೇಶಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.