ಹೊಸದುರ್ಗ: ಶಿವನಿ ರೈಲು ನಿಲ್ದಾಣದ ಟ್ರಾಕ್ಮನ್ ಹರೀಶ್ (34) ನೀರು ಕುಡಿಯಲು ತಾಲ್ಲೂಕಿನ ಜಮ್ಮಾಪುರದಲ್ಲಿ ಸಮೀಪದ ತೋಟಕ್ಕೆ ಹೋದಾಗ ವಿದ್ಯುತ್ ಶಾರ್ಟ್ ಸರ್ಕಿಟ್ ಆಗಿ ಮೃತಪಟ್ಟಿದ್ದಾರೆ.
ಹಳೇಕುಂದೂರು ಗ್ರಾಮದ ಅವರು ಶಿವನಿ ರೈಲ್ವೆ ನಿಲ್ದಾಣದಿಂದ ರೈಲ್ವೆ ಟ್ರ್ಯಾಕ್ ವೀಕ್ಷಿಸುತ್ತಾ ಜಮ್ಮಾಪುರ ಬಳಿ ಬಂದಿದ್ದಾರೆ. ಬಾಯಾರಿಕೆ ನೀಗಿಸಿ ಕೊಳ್ಳಲು ರಂಗಪ್ಪ ಎಂಬುವವರ ತೋಟಕ್ಕೆ ಹಾಕಿದ್ದ ತಂತಿಬೇಲಿ ದಾಟಿ ಹೋಗುವಾಗ ಈ ದುರ್ಘಟನೆ ನಡೆದಿದೆ. ಇದು ನಿರಂತರ ಜ್ಯೋತಿ ಅಕ್ರಮ ಸಂಪರ್ಕ ವಾಗಿತ್ತು ಎಂದು ಮೂಲಗಳು ತಿಳಿಸಿವೆ.
ಆಕ್ರಂದನ: ವಾರದ ಹಿಂದೆಯಷ್ಟೇ ಮಧು ಎಂಬುವವರನ್ನು ಹರೀಶ್ ಮದುವೆ ಆಗಿದ್ದರು. ಮದುವೆ ರಜೆ ಕಳೆದು ಸೇವೆಗೆ ಹಾಜರಾದ ಎರಡೇ ದಿನದಲ್ಲಿ ಈ ಘಟನೆ ನಡೆದಿದ್ದು, ಪತ್ನಿ, ಪೋಷಕರಿಗೆ ಆಘಾತವನ್ನುಂಟು ಮಾಡಿದೆ. ಅವರ ಆಂಕ್ರದನ ಮುಗಿಲು ಮುಟ್ಟಿತ್ತು.
ರೈಲು ತಡೆದು ಪ್ರತಿಭಟನೆ: ಟ್ರ್ಯಾಕ್ಮೆನ್ ಮೃತಪಟ್ಟು ಎರಡು ತಾಸಾದರೂ ಸ್ಥಳಕ್ಕೆ ಧಾವಿಸದ ರೈಲ್ವೆ ಇಲಾಖೆ ಅಧಿಕಾರಿಗಳ ಧೋರಣೆ ಖಂಡಿಸಿ, ಸಾರ್ವಜನಿಕರು ಎರಡು ಮುಕ್ಕಾಲು ಗಂಟೆ ಪ್ರತಿಭಟಿಸಿದರು. ಇದರಿಂದ ರೈಲು ಸಂಚಾರಕ್ಕೆ ತಡೆ ಉಂಟಾಯಿತು. ಪ್ರಯಾಣಿಕರಿಗೆ ತೀವ್ರ ತೊಂದರೆಯಾಯಿತು. ನಂತರ ಸ್ಥಳಕ್ಕೆ ಬಂದ ಅಧಿಕಾರಿಗಳು ಪರಿಶೀಲನೆ ನಡೆಸಿ ಇಲಾಖೆಯಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.
ಅಕ್ರಮ ವಿದ್ಯುತ್ ಸಂಪರ್ಕ: ತಾಲ್ಲೂಕಿ ನಲ್ಲಿ ನಿರಂತರ ಜ್ಯೋತಿ ವಿದ್ಯುತ್ ಅಕ್ರಮ ಸಂಪರ್ಕ ಹೆಚ್ಚಾಗುತ್ತಿದ್ದರೂ ಬೆಸ್ಕಾಂ ನಿರ್ಲಕ್ಷ್ಯ ವಹಿಸುತ್ತಿದೆ. ಈಚೆಗಷ್ಟೇ ದೇವಿಗೆರೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್ ಆಗಿ ಯುವಕನೊಬ್ಬ ಮೃತಪಟ್ಟಿದ್ದರು. ಅದೇ ರೀತಿಯಲ್ಲಿ ನಡೆದಿರುವ ಎರಡನೇ ಪ್ರಕರಣ ಇದಾಗಿದೆ. ಇನ್ನಾದರೂ ಅಕ್ರಮ ವಾಗಿ ವಿದ್ಯುತ್ ಸಂಪರ್ಕ ಪಡೆದು ಕೊಳ್ಳುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಬೆಸ್ಕಾಂ ಮುಂದಾ ಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಹೊಸದುರ್ಗದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.