ಶಿವಮೊಗ್ಗ : ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ತರಬೇಕು ಹಾಗೂ ಮಾದಿಗ ಸಮಾಜದವರಿಗೆ ಆಗುತ್ತಿರುವ ಅನ್ಯಾಯ ತಪ್ಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಮಾದಿಗ ದಂಡೋರ ಸಮಿತಿ ಮತ್ತು ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಘಟಕದ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಸಾವಿರಾರು ಜನರು ನಗರದ ಸೈನ್ಸ್ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಾಲ್ಲೂಕಿನ ಸಿದ್ಲಿಪುರ ಗ್ರಾಮದ ಮಾದಿಗ ಸಮಾಜದವರಿಗೆ ಪ್ರಭಾವಿ ಕುಟುಂಬದವರಿಂದ ಭೂ ಕಬಳಿಕೆ ದೌರ್ಜನ್ಯ ನಡೆಯುತ್ತಿದ್ದು ಇದಕ್ಕೆ ತಡೆ ನೀಡಬೇಕು ಎಂದು ಆಗ್ರಹಿಸಿದರು.
ಶತಮಾನಗಳ ಕಾಲದಿಂದಲೂ ಮಾದಿಗ ಸಮಾಜ ತುಳಿತಕ್ಕೆ ಒಳಗಾಗಿದ್ದು ಯಾವುದೆ ಅಭಿವೃದ್ಧಿ ಕಾಣದೆ ಮೇಲ್ವರ್ಗದವರ ದೌರ್ಜನ್ಯ, ದಬ್ಬಾಳಿಕೆ ಮತ್ತು ಅನ್ಯಾಯಗಳಿಗೆ ತುತ್ತಾಗಿದೆ. ಇದಕ್ಕೆ ಉದಾಹರಣೆಯಾಗಿ ಭದ್ರಾವತಿ ತಾಲ್ಲೂಕು ಸಿದ್ಲಿಪುರ ಗ್ರಾಮದ ಮಾದಿಗ ಸಮಾಜದವರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.
ಇಲ್ಲಿನ ಮಾದಿಗ ಸಮಾಜದ ಕುಟುಂಬಗಳಿಗೆ ಅಂದಿನ ಮೈಸೂರು ಸರ್ಕಾರದ ಅವಧಿಯಲ್ಲಿ 31 ಎಕರೆ 9 ಗುಂಟೆ ಜಮೀನು ನೀಡಲಾಗಿದೆ. ಅಂದಿನ ಕಂದಾಯ ಮಂತ್ರಿ ಬಸವಲಿಂಗಪ್ಪ ಅವರು 1978ರಲ್ಲಿ ವಿವೋ ಎಸಿ ಕಾಯ್ದೆಯಡಿ ಈ ಜಮೀನನ್ನು ಯಾವುದೆ ರೀತಿಯಲ್ಲೂ ವಂಶಸ್ಥರನ್ನು ಹೊರತು ಬೇರೆ ಯಾರಿಗೂ ಮಾರಾಟ ಮಾಡದಂತೆ ಉಲ್ಲೇಖಿಸಲಾಗಿದೆ.
ಒಂದು ವೇಳೆ ಮಾರಾಟ ಮಾಡಿದ್ದರೂ ಇನಾಂ ಜಮೀನಾಗಿರುವುದರಿಂದ ಮೂಲ ಮಂಜೂರಿದಾರರಿಗೆ ಬಿಡಿಸಿಕೊಡಬೇಕೆಂದು ಕಾಯ್ದೆ ರೂಪಿಸಲಾಗಿದೆ. ಆದರೂ ಪ್ರಭಾವಿ ವ್ಯಕ್ತಿಗಳು ಸುಳ್ಳು ದಾಖಲೆ ಸಲ್ಲಿಸಿ ತಮ್ಮ ಹೆಸರಿಗೆ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾಡಳಿತ ಶೀಘ್ರವೇ ಅನ್ಯಾಯಕ್ಕೊಳಗಾದ ದಲಿತರಿಗೆ ನ್ಯಾಯ ದೊರಕಿಸಿಕೊಡಬೇಕು. ಸರ್ಕಾರ ನ್ಯಾ. ಸದಾಶಿವ ಆಯೋಗದ ವರದಿ ಜಾರಿಗೊಳಿಸಿ ಮಾದಿಗ ಸಮಾಜದ ಹಿತರಕ್ಷಣೆ ಕಾಪಾಡಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಭಾನುಪ್ರಕಾಶ್, ಹೊಳೆಯಪ್ಪ, ಮಂಜಪ್ಪ, ರವಿಕುಮಾರ್, ರಂಗಪ್ಪ, ಗಂಗಾಧರ್, ಮಹದೇವಪ್ಪ, ಗುರುರಾಜ್, ಹನುಮಂತಪ್ಪ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.