ADVERTISEMENT

ಸರ್ವಋತು ಜಲಪಾತ ಯೋಜನೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 17 ಮೇ 2017, 5:18 IST
Last Updated 17 ಮೇ 2017, 5:18 IST

ಶಿವಮೊಗ್ಗ: ಸರ್ವಋತು ಜೋಗ ಜಲಪಾತ ಯೋಜನೆ ಸಂಪೂರ್ಣ ಅವೈಜ್ಞಾನಿಕ. ಸರ್ಕಾರ ಕೂಡಲೇ ಯೋಜನೆ ರದ್ದು ಮಾಡಬೇಕು ಎಂದು ಪರಿಸರ ಆಸಕ್ತರ ಬಳಗ ಆಗ್ರಹಿಸಿದೆ. ಮಳೆಗಾಲದಲ್ಲಿ ಪ್ರಕೃತಿದತ್ತ ಸೌಂದರ್ಯದಿಂದ ಕಂಗೊಳಿಸುತ್ತದೆ.

ಆದರೆ, ಸರ್ಕಾರ ಸರ್ವಋತು ಹೆಸರಿನಲ್ಲಿ ವರ್ಷದ 365 ದಿನವೂ ಜಲಪಾತ ಧುಮ್ಮಿಕ್ಕಲು ಯೋಜನೆ ರೂಪಿಸಿದೆ. ವಿಶ್ವ ವಿಖ್ಯಾತ ಜಲಪಾತವನ್ನು 60 ವರ್ಷ ಖಾಸಗಿ ವ್ಯಕ್ತಿಗೆ ಭೋಗ್ಯಕ್ಕೆ ನೀಡಲಾಗುತ್ತಿದೆ. ಆ ಮೂಲಕ ಪರೋಕ್ಷವಾಗಿ ಸರ್ಕಾರ ಜಲಪಾತವನ್ನೇ ಮಾರಾಟ ಮಾಡಲು ಹೊರಟಿದೆ ಎಂದು ಬಳಗದ ಮುಖಂಡ ಹೊ.ನ. ಸತ್ಯ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಸರ್ವಋತು ಯೋಜನೆ ತಾಂತ್ರಿಕ ವಾಗಿಯೂ ಸರಿಯಲ್ಲ. ಜಲಪಾತದ ನೀರು ಧುಮ್ಮಿಕ್ಕುವ ಗುಂಡಿಯಲ್ಲಿ 23 ಸಾವಿರ ಘನ ಅಡಿ ನೀರಿನ ಸಾಮರ್ಥ್ಯ ತೊಟ್ಟಿ ನಿರ್ಮಿಸಿ, ಮತ್ತೆ ನೀರು ಮೇಲಕ್ಕೆ ಎತ್ತಿ 1,200 ಮಿ.ಮೀ. ಗಾತ್ರದ ಕೊಳವೆಗಳ ಮೂಲಕ ಸಾಗಿಸಲಾಗುತ್ತದೆ.

ADVERTISEMENT

ಹೀಗೆ ಸಾಗಿಸಿದ ನೀರು ಸೇತುವೆಯ ಬಳಿಯ ಸೀತಾ ಕಟ್ಟೆ ಹತ್ತಿರ ನಿರ್ಮಿಸುವ 15 ಅಡಿ ಎತ್ತರದ ಜಲಾಶಯದಲ್ಲಿ ಸಂಗ್ರಹಿಸಲಾಗುತ್ತದೆ. ಕೊಳವೆಗಳ ಮೂಲಕ ಸೀತಾಕಟ್ಟೆಯ ಜಲಾಶಯಕ್ಕೆ ನೀರು ಪಂಪ್ ಮಾಡಲು ಜಲಪಾತದ ಬಳಿ ಸಣ್ಣ ವಿದ್ಯುತ್ ಘಟಕ ಸ್ಥಾಪಿಸುವ ಕುರಿತು ಯೋಜನೆ ರೂಪಿಸಲಾಗಿದೆ ಎಂದರು.

ಜೋಗದ ಗುಂಡಿಯ ತೊಟ್ಟಿಯಿಂದ ಸೀತಾ ಕಟ್ಟೆಯ ಜಲಾಶಯಕ್ಕೆ ಸುಮಾರು 1 ಕಿ.ಮೀ. ಸುರಂಗ ನಿರ್ಮಿಸ ಲಾಗುವುದು. ಸೀತಾ ಕಟ್ಟೆಯ ಜಲಾಶಯದಲ್ಲಿ 200 ಕ್ಯುಸೆಕ್ ನೀರು 4 ಕವಲುಗಳಿಗೆ ಹರಿಸುವುದು ಪ್ರಕೃತಿಗೆ ವಿರುದ್ಧವಾದ ಯೋಜನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಾ. ಶೇಖರ್‌ ಗೌಳೇರ್ ಮಾತನಾಡಿ, ಜೋಗ ಜಲಪಾತ ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆ ಗಡಿಯ ಅತಿ ಸೂಕ್ಷ್ಮ ವನ್ಯಜೀವಿ ತಾಣ. ವಿಶ್ವ ಪರಂಪರೆಯ ತಾಣವೂ ಹೌದು. ಕಾನೂನಿನ ಪ್ರಕಾರ ಯಾವುದೇ ಬೃಹತ್ ಕಾಮಗಾರಿ ಇಲ್ಲಿ ಕೈಗೊಳ್ಳುವಂತಿಲ್ಲ ಎಂದರು. ಬಳಗದ ಮುಖಂಡರಾದ ಟಿ.ಎಂ. ಅಶೋಕ್ ಯಾದವ್, ಡಾ. ಪರಿಸರ ನಾಗರಾಜ್, ಎನ್.ಗೋಪಿನಾಥ್, ಅಜಯ್ ಶರ್ಮಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.