ಹೊಸನಗರ: ‘ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಯಡಿ ಸಾಲ ಪಡೆದವರಿಗೆ ವಿಮಾ ಭದ್ರತೆ ಯೋಜನೆ ಜಾರಿಗೆ ತರಲಾಗಿದೆ’ ಎಂದು ಯೋಜನಾಧಿಕಾರಿ ಹೇಮಲತಾ ಹೆಗ್ಡೆ ಹೇಳಿದರು.ಇತ್ತೀಚೆಗೆ ನಿಧನರಾದ ತೊಗರೆ ದುರ್ಗಾ ಪರಮೇಶ್ವರಿ ಸ್ವಸಹಾಯ ಸಂಘದ ಸದಸ್ಯ ಚಂದ್ರಪ್ಪ ಅವರ ಪತ್ನಿಗೆ ಶುಕ್ರವಾರ ವಿಮಾ ಪರಿಹಾರದಹಣದ ಚೆಕ್ ವಿತರಿಸಿ ಅವರು ಮಾತನಾಡಿದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸದಸ್ಯರು ಕುಟುಂಬದ ಅಭಿವೃದ್ದಿಗೆ ಸಾಲ ಪಡೆದು ಕೊಳ್ಳುತ್ತಿದ್ದಾರೆ. ಕುಟುಂಬದ ಭದ್ರತೆಗಾಗಿ ಬಜಾಜ್ ಅಲಯನ್ಸ್ ಇನ್ಶೂರೆನ್ಸ್ ಮೂಲಕ ವಿಮಾ ಸೌಲಭ್ಯ ನೀಡಲು ಯೋಜನೆ ಕ್ರಮ ಕೈಗೊಂಡಿದೆ ಎಂದು ಹೇಳಿದರು.‘ಈ ಯೋಜನೆಯಲ್ಲಿ ಸಾಲ ಪಡೆದ ಸದಸ್ಯರಿಗೆ ಮತ್ತು ಆ ಸಾಲವನ್ನು ಸದ್ಬಳಕೆ ಮಾಡಿಕೊಡ ಆ ಕುಟುಂಬದ ಸದಸ್ಯರಿಗೂ ವಿಮೆ ಸೌಲಭ್ಯ ಸಿಗಲಿದೆ. ಅತ್ಯಂತ ಕಡಿಮೆ ಮೊತ್ತದ ಪ್ರೀಮಿಯಂ ಪಡೆದುಕೊಂಡು ಸಾಲಕ್ಕೆಭದ್ರತೆ ಒದಗಿಸಲಾಗುತ್ತಿದೆ’ ಎಂದು ತಿಳಿಸಿದರು.
ಈ ಸಂಬಂಧ ತಾಲ್ಲೂಕಿನ ಜಯನಗರ ವಲಯದ ತೊಗರೆ ಗ್ರಾಮದ ದುರ್ಗಾಪರಮೇಶ್ವರಿ ಸಂಘದ ಸದಸ್ಯರಾದ ಚಂದ್ರಪ್ಪ ಅವರು ಅಕ್ಟೋಬರ್ 10ರಂದು ₹ 84,748 ಸಾಲ ಪಡೆಕೊಂಡಿದ್ದು, ₹ 171 ಮೊತ್ತದ ವಿಮೆ ಮಾಡಿಸಿದ್ದರು. ನಾಮಿನಿಯಾದ ಅವರ ಪತ್ನಿ ಗೌರಿ ಅವರಿಗೆ ₹ 84,748 ವಿಮಾ ಮೊತ್ತವನ್ನು ವಿತರಿಸಲಾಗಿದೆ ಎಂದರು.
ಈ ಸಂದರ್ಭ ವಲಯದ ಮೇಲ್ವಿಚಾರಕ ಸುಬ್ರಹ್ಮಣ್ಯ ಹಾಗೂ ಸೇವಾ ಪ್ರತಿನಿಧಿ ರೇಖಾ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.