ಶಿವಮೊಗ್ಗ : ಪ್ರಸ್ತುತ ದಿನಗಳಲ್ಲಿ ಸ್ಮರಣಾ ಶಕ್ತಿ ಜಾಗೃತಗೊಳಿಸುವಂತಹ ಶಿಕ್ಷಣ ಅಗತ್ಯವಿದೆ ಎಂದು ಚಿಂತಕ ಪ್ರೊ.ಗಣೇಶ್ ಎನ್.ದೇವಿ ಹೇಳಿದರು.
ಇಲ್ಲಿನ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಮಾನಸ ಟ್ರಸ್ಟ್ನಿಂದ ಶನಿವಾರ ಏರ್ಪಡಿಸಿದ್ದ ಡಾ.ಅಶೋಕ್ ಪೈ ಮಾನಸ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದಿನ ಶಿಕ್ಷಣ ಕೇವಲ ಪಠ್ಯ ಕೇಂದ್ರಿತವಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಜ್ಞಾನ ಮತ್ತು ಬೌದ್ಧಿಕ ಮಟ್ಟ ವೃದ್ಧಿಯಾಗುತ್ತಿಲ್ಲ. ವಿದ್ಯಾರ್ಥಿಗಳಿಗೆ ಪ್ರಾಪಂಚಿಕಜ್ಞಾನದ ಶಿಕ್ಷಣದ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಮುನ್ನಡೆಯಬೇಕು. ಆಗ ಸಮಾಜಕ್ಕೆ ಸದೃಢ ಪ್ರಜೆಗಳನ್ನು ನೀಡಲು ಸಾಧ್ಯ ಎಂದರು.
ಡಾ.ಅಶೋಕ್ ಪೈ ಮನೋ ವಿಜ್ಞಾನವನ್ನು ಮನೆಮನೆಗೆ ತಲುಪಿಸುವಂತಹ ಕೆಲಸ ಮಾಡಿದ್ದರು. ಮನೋ ವಿಜ್ಞಾನದ ಕುರಿತು ಸಮಾಜಕ್ಕೆ ಜಾಗೃತಿ ಮೂಡಿಸುವಂತಹ ಅನೇಕ ಕೆಲಸ ಮಾಡಿದ್ಡರು. ಇಂತಹ ಕೆಲಸಗಳು ಎಲ್ಲಾ ಕಾಲಕ್ಕೂ ಮುಂದುವರೆಯಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಮಾನಸ ಟ್ರಸ್ಟ್ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಚಲನಚಿತ್ರ ನಿರ್ದೇಶಕ ಸುರೇಶ್ ಹೆಬ್ಳೀಕರ್ ಮಾತನಾಡಿ, ‘ಡಾ.ಅಶೋಕ್ ಪೈ ಅವರು ಕೇವಲ ವೈದ್ಯಕೀಯ ಕ್ಷೇತ್ರಕ್ಕೆ ಸೀಮಿತವಾಗದೇ ಚಲನಚಿತ್ರದ ಮೂಲಕವೂ ಮನೋವಿಜ್ಞಾನದ ವಿವಿಧ ಪ್ರಕಾರಗಳನ್ನು ತೋರಿಸುವ ಪ್ರಯತ್ನ ಮಾಡಿದ್ದರು. ಈ ಮೂಲಕ ಮನೋರೋಗಗಳ ಸಮಸ್ಯೆ ಮತ್ತು ಪರಿಹಾರವನ್ನು ಚಿತ್ರದ ಮೂಲಕ ತಿಳಿಸಿದ್ದರು’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಡಾ.ಕೆ.ವಿ.ಕಿಶೋರ್ ಕುಮಾರ್, ಡಾ.ಆನಂದ ಪಾಂಡುರಂಗಿ, ಡಾ.ಹಮೀದ್ ದಾಬೋಲ್ಕರ್ ಅವರಿಗೆ ಡಾ.ಅಶೋಕ್ ಪೈ ಮಾನಸ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಜೋಗನ್ ಶಂಕರ್, ಡಾ.ರಾಜೇಂದ್ರ ಚೆನ್ನಿ, ಪ್ರಧಾನ ಟ್ರಸ್ಟಿ ಡಾ.ರಜನಿ ಪೈ, ಡಾ.ಪ್ರೀತಿ ಶಾನಭೋಗ್, ಮುಕುಂದ್ ಪೈ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.