ಹೊಸನಗರ: ನಗರ ಹೋಬಳಿಯಲ್ಲಿ ಅರಣ್ಯ ಭೂಮಿಯಾಗಿ ಪರಿವರ್ತನೆಯಾಗಿದ್ದ ಸಾವಿರಾರು ಎಕರೆ ಪ್ರದೇಶವನ್ನು ಪುನಃ ಕಂದಾಯ ಇಲಾಖೆಗೆ ಹಸ್ತಾಂತರಿಸಬೇಕು ಎಂದು ಆಗ್ರಹಿಸಿ ನಗರ ಹೋಬಳಿ ನಾಗರಿಕ ವೇದಿಕೆ ಸದಸ್ಯರು ಸೋಮವಾರ ಧರಣಿ ಆರಂಭಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡ ಆರಗ ಜ್ಞಾನೇಂದ್ರ , ಕಂದಾಯ ಇಲಾಖೆಯ ಅಧೀನದಲ್ಲಿದ್ದ ಭೂಮಿಯನ್ನು ಅನ್ಯಕಾರಣಕ್ಕಾಗಿ ಅರಣ್ಯ ಇಲಾಖೆಗೆ ಹಸ್ತಾಂತರಿಸುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
‘ಕರ್ನಾಟಕ ವಿದ್ಯುತ್ ನಿಗಮದ ವ್ಯಾಪ್ತಿಯಲ್ಲಿ ವಸತಿ ಹಾಗೂ ಕೃಷಿ ಭೂಮಿಯನ್ನು ಮರಳಿ ಕಂದಾಯ ಇಲಾಖೆಗೆ ಹಸ್ತಾಂತರಿಸಬೇಕು. ಈ ಪ್ರದೇಶದಲ್ಲಿರುವ ಸಾವಿರಾರು ಕುಟುಂಬಗಳಿಗೆ ಈ ಭೂಮಿಯನ್ನು ಮಂಜೂರು ಮಾಡಬೇಕು’ ಎಂದು ಒತ್ತಾಯಿಸಿದರು.
ಮಾಜಿ ಶಾಸಕ ಬಿ.ಸ್ವಾಮಿರಾವ್ ಮಾತನಾಡಿ, ಹೋಬಳಿಯಲ್ಲಿರುವ 4 ಜಲಾಶಯಗಳ ನದಿ ಪಾತ್ರದಲ್ಲಿರುವ ಡೆಲ್ಟಾ ಪ್ರದೇಶದ ಮರಳನ್ನು ಸಂಗ್ರಹಿಸಿ ಸಾಗಿಸಲುವ ವಿವಿಧ ಇಲಾಖೆಗಳು ಅಡಚಣೆ ಮಾಡುತ್ತಿದೆ. ಮನೆ ಬಳಕೆಗೆ ಮರಳನ್ನು ಬಳಸಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ನಾಗರಿಕ ವೇದಿಕೆ ಸಂಚಾಲಕ ಬಿ.ಜಿ.ಶ್ರೀಕರ ಮಾತನಾಡಿ, ‘ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಶಾಸಕ ಕಿಮ್ಮನೆ ರತ್ನಾಕರ ಅವರ ಸ್ಪಷ್ಟ ಆದೇಶ ಇದ್ದರೂ ಅರಣ್ಯ ಭೂಮಿ ಹಕ್ಕುಪತ್ರ ನೀಡುವಲ್ಲಿ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ’ ಎಂದರು.
ಕಸ್ತೂರಿರಂಗನ್ ವರದಿ ಅನುಷ್ಠಾನದಿಂದ ನಗರ ಹೋಬಳಿಯ ಅಭಿವೃದ್ಧಿ ಕುಂಠಿತವಾಗುತ್ತದೆ. ಕೃಷಿಕರಿಗೆ ಅಪಾರ ನಷ್ಟ ಆಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ವೇದಿಕೆಯ ಅಧ್ಯಕ್ಷ ಫಕೀರಪ್ಪ ಜಿಲ್ಲಾ ಪಂಚಾಯ್ತಿ ಸದಸ್ಯ ಸುರೇಶ್ ಸ್ವಾಮಿರಾವ್, ಕರುಣಾಕರ ಶೆಟ್ಟಿ, ನೇತ್ರಾ ಗೋಪಾಲ್, ಸುಳಗೋಡು ಶ್ರೀಧರ್, ಕೊಡಸೆ ಚಂದ್ರಪ್ಪ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.