ಶಿವಮೊಗ್ಗ: ಜಿಲ್ಲಾಡಳಿತದ ನಿರ್ಬಂಧದ ನಡುವೆಯೂ ಸೋಮವಾರ ತಾಲ್ಲೂಕಿನ ಆಯನೂರು ಕೋಟೆ ಗ್ರಾಮದಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆ ವೇಳೆ ಹೋರಿ ತಿವಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಬಾಳೇಕೊಪ್ಪ ಗ್ರಾಮದ ಚಂದ್ರಶೇಖರ್ (40) ಮೃತ ವ್ಯಕ್ತಿ. ದೀಪಾವಳಿ ಹಬ್ಬದ ನಂತರ ನಡೆಸುವ ಈ ಸ್ಪರ್ಧೆಯನ್ನು ಗ್ರಾಮದಲ್ಲಿ ಆಯೋಜಿಸಲಾಗಿತ್ತು. ಸ್ಪರ್ಧೆ ನೋಡಲು ಬಂದಿದ್ದ ಚಂದ್ರಶೇಖರ್ ಅವರಿಗೆ ಹೋರಿ ತಿವಿದಿದೆ.
ದೀಪಾವಳಿ ನಂತರದಿಂದ ಸಂಕ್ರಾಂತಿ ಹಬ್ಬದವರೆಗೂ ಶಿಕಾರಿಪುರ, ಸೊರಬ, ಶಿವಮೊಗ್ಗ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಹೋರಿ ಬೆದರಿಸುವ ಸ್ಪರ್ಧೆಯನ್ನು ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬರಲಾಗುತ್ತಿದೆ.
ಕಳೆದ ವರ್ಷ ಸೊರಬ ತಾಲ್ಲೂಕಿನ ತಲ್ಲೂರು ಗ್ರಾಮದಲ್ಲಿ ನಡೆದ ಸ್ಪರ್ಧೆಯಲ್ಲಿ ಹೋರಿ ತಿವಿದು ಇಬ್ಬರು ಮೃತಪಟ್ಟಿದ್ದರು. ಈ ಬಾರಿ ಅನಾಹುತಗಳಾಗಬಾರದೆಂದು ಇಂಥ ಸ್ಪರ್ಧೆಗಳಿಗೆ ಜಿಲ್ಲಾಡಳಿತ ನಿಷೇಧ ಹೇರಿತ್ತು. ಆದರೆ, ಗ್ರಾಮಸ್ಥರ ಒತ್ತಾಯದ ಮೇರೆಗೆ ಜೂಜಾಟವಿಲ್ಲದೆ, ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ಸ್ಪರ್ಧೆ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.