ಶೆಟ್ಟೀಕೆರೆ: ಎಡೆಯೂರು ಸಿದ್ಧಲಿಂಗೇಶ್ವರ ಸ್ವಾಮಿ ಲಕ್ಷ ದೀಪೋತ್ಸವ ಪ್ರಯುಕ್ತ ಉತ್ತರ ಕರ್ನಾಟಕದ ವಿವಿಧೆಡೆಯಿಂದ ಪಾದಯಾತ್ರೆಯಲ್ಲಿ ಹೊರಟಿರುವ ಭಕ್ತರು ಶೆಟ್ಟೀಕೆರೆ ಹೋಬಳಿ ತರಬೇನಹಳ್ಳಿಯಲ್ಲಿ ತಂಗಿದ್ದರು.
ಬಾಗಲಕೋಟೆ, ಧಾರವಾಡ, ಗದಗ ಮತ್ತಿತರ ಜಿಲ್ಲೆಗಳ ಭಕ್ತರು ನ. 4ರಂದು ಪಾದಯಾತ್ರೆ ಕೈಗೊಂಡಿದ್ದಾರೆ. ಪಾದಯಾತ್ರಿ ತೋಪಣಗೌಡ ಮಾತನಾಡಿ ‘ನಮ್ಮ ಆಸೆಗಳ ಈಡೇರಿಕೆಗಾಗಿ ಮತ್ತು ಕುಟುಂಬ, ಗ್ರಾಮ ನೆಮ್ಮದಿಯಾಗಿರಲೆಂದು ಹಿರಿಯರು ನಡೆಸಿಕೊಂಡು ಬಂದ ಸಂಪ್ರದಾಯವನ್ನು ಮುಂದುವರಿಸಿ ದ್ದೇವೆ. ಪ್ರತಿವರ್ಷ ಪಾದಯಾತ್ರೆ ಕೈಗೊಳ್ಳುತ್ತೇವೆ’ ಎಂದು ಅವರು ತಿಳಿಸಿದರು.
ನಾಯಕನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ್ ಶಿವಪ್ಪ ಕಟ್ಲಿ, ‘ಪಾದಯಾತ್ರೆಯಿಂದ ಆಯುಷ್ಯ ಆರೋಗ್ಯ ಗಟ್ಟಿಯಾಗುತ್ತದೆ. ಪ್ರತಿನಿತ್ಯ 30ರಿಂದ 40 ಕಿಲೋ ಮೀಟರ್ ನಡೆಯುತ್ತೇವೆ. ಇದರಿಂದ ನರನಾಡಿಗಳೆಲ್ಲಾ ಸಡಿಲಗೊಂಡು ರಕ್ತ ಸಂಚಾರ ಸರಾಗವಾಗುತ್ತದೆ’ ಎಂದು ವಿವರಿಸಿದರು.
ಭಕ್ತ ನೀಲಪ್ಪ ಮಲ್ನಾಡದ, ದಾರಿ ಮಧ್ಯದಲ್ಲಿ ಭಕ್ತರು ಊಟೋಪಚಾರ ವ್ಯವಸ್ಥೆ ಮಾಡುವುದರಿಂದ ಪಾದಯಾತ್ರೆ ಸಮಯದಲ್ಲಿ ಹಣ ಖರ್ಚಾಗುವುದಿಲ್ಲ. ವಿವಿಧ ಊರು ಮತ್ತು ಜನರ ಪರಿಚಯವಾಗಿ, ಭಾವನಾತ್ಮಕ ಸಂಬಂಧ ಬೆಳೆಯಲು ಸಹಕಾರಿಯಾಗುತ್ತಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.