ಹುಳಿಯಾರು: ಪಟ್ಟಣದ ಪ್ರಸನ್ನ ಗಣಪತಿ ದೇಗುಲದಲ್ಲಿ ಪ್ರತಿಷ್ಟಾಪಿಸಲಾಗಿದ್ದ ಪರಿಸರಗಣಪತಿಯ ಉತ್ಸವ ನಡೆಸಲು ಮುಖ್ಯರಸ್ತೆಯಲ್ಲಿನ ಮರಗಳನ್ನು ಗುರುವಾರ ರಾತ್ರಿ ಕಡಿದು ಹಾಕಿರುವುದು ಸಾಮಾಜಿಕ ಜಾಲತಾಣ ಹಾಗೂ ಸಾರ್ವಜನಿಕವಾಗಿ ವ್ಯಾಪಕ ಟೀಕೆಗೆ ಗುರಿಯಾಗಿದೆ.
ತಿಂಗಳ ಹಿಂದೆ ಗಣಪತಿ ಪ್ರತಿಷ್ಟಾಪಿಸಲಾಗಿತ್ತು. ಶುಕ್ರವಾರ ವಿಸರ್ಜನಾ ಉತ್ಸವ ಸಂಚರಿಸಬೇಕಾಗಿತ್ತು. ಇದಕ್ಕಾಗಿ ಪಟ್ಟಣದ ಡಾ.ರಾಜ್ಕುಮಾರ್ ರಸ್ತೆಯ ಇಕ್ಕೆಲಗಳ ಮರಗಳ ಕೊಂಬೆಗಳನ್ನು ಕಡಿದು ಹಾಕಿದ್ದು ಸಮಿತಿಯವರ ಜತೆ ಬೆಸ್ಕಾಂ ಇಲಾಖೆ ಅಧಿಕಾರಿಗಳು ಇದ್ದುದು ಮತ್ತೊಂದು ಗೊಂದಲಕ್ಕೆ ದಾರಿಯಾಗಿದೆ.
ಉತ್ಸವ ಬರುವ ವೇಳೆ ಮರದ ಕೊಂಬೆಗಳು ಅಡ್ಡಿಯಾಗ ಬಹುದೆಂದು ಸಣ್ಣಪುಟ್ಟ ಕೊಂಬೆ ಸವರಲು ಮುಂದಾಗಿದ್ದರು. ನಂತರ ದಪ್ಪ ಗಾತ್ರದ ಕೊಂಬೆಗಳನ್ನು ಕಡಿದು ಉರುಳಿಸಿದ್ದಾರೆ. ಈ ಬಗ್ಗೆ ಅಲ್ಲೇ ಇದ್ದ ಎಸ್.ಟಿ.ಡಿ ಶಂಕರಣ್ಣ ಎಂಬುವವರು ತಕರಾರು ತೆಗೆದಿದ್ದರಿಂದ ವಾಗ್ವಾದ ನಡೆದು ಅಷ್ಟಕ್ಕೇ ಮರ ಕಡಿಯುವುದನ್ನು
ನಿಲ್ಲಿಸಿದ್ದಾರೆ.
ಪರಿಸರ ಕಾಳಜಿ ಬಗ್ಗೆ ಬಹು ದೊಡ್ಡ ಚರ್ಚೆಯಾಗುತ್ತಿದೆ. ಆದರೆ ಪರಿಸರದ ಬಗ್ಗೆ ಸ್ವಲ್ಪವೂ ಕಾಳಜಿ ತೋರದೆ ಮರಗಳ ದೊಡ್ಡ ಕೊಂಬೆಗಳನ್ನು ಕಡಿದಿರುವುದು ಎಷ್ಟು ಸರಿ ಎಂದು ಪರಿಸರ ಪ್ರೇಮಿ ಪ್ರಕಾಶ್ ಚೌಧ್ರಿ ಪ್ರಶ್ನಿಸಿದ್ದಾರೆ. ಅನುಮತಿ ಕೇಳಿದ ತಕ್ಷಣ ಹಿಂದೆ ಮುಂದೆ ನೋಡದೆ ಅನುಮತಿ ನೀಡಿದ ಬೆಸ್ಕಾಂ ಅಧಿಕಾರಿಗಳ ಕಾರ್ಯವೈಖರಿ ಸಾರ್ವಜನಿಕರಲ್ಲಿ ಅಸಮಾದಾನ ಮೂಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.