ತುಮಕೂರು: ನಗರದ ದಿಬ್ಬೂರಿನಲ್ಲಿ ರಾಜೀವ್ ಆವಾಸ್ ಯೋಜನೆಯಡಿ ನಿರ್ಮಿಸಲಾದ 1200 ಮನೆಗಳಲ್ಲಿ ಈವರೆಗೆ ಒಟ್ಟು 735 ಮನೆಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಲು ಜಿಲ್ಲಾ ಮೇಲ್ವಿಚಾರಣಾ ಸಮಿತಿ ಅನುಮೋದನೆ ನೀಡಿದೆ.
ಮಾರಿಯಮ್ಮನಗರ, ಮಂಡಿಪೇಟೆ ದೊಡ್ಡ ಚರಂಡಿ, ಶಾಂತಿ ಹೋಟೆಲ್ ಹಿಂಭಾಗ, ಗುಬ್ಬಿ ವೀರಣ್ಣ ಕಲಾ ಕ್ಷೇತ್ರ ಹಿಂಭಾಗ, ಬೆಳಗುಂಬ ರಸ್ತೆಯ ಬೀದಿ ಬದಿ ವಾಸಿಗಳು, ಅಮಾನಿಕೆರೆ ಸ್ಥಳಾಂತರದ ವಾಸಿಗಳು, ಮರಳೂರು ಜನತಾ ಕಾಲೊನಿ, ಹೈಟೆನ್ಷನ್ ವಿದ್ಯುತ್ ಮಾರ್ಗದ ಕೆಳಗಿರುವ ನಿವಾಸಿಗಳು, ಕೊಳಚೆ ಪ್ರದೇಶದ ಸ್ಥಳಾಂತರವಾದ ಫಲಾನುಭವಿಗಳು, ಆಟೊ ಚಾಲಕರು, ಅಂಗವಿಕಲ ಫಲಾನುಭವಿಗಳನ್ನು ಗುರುತಿಸಿ ಅನುಮೋದಿಸಲಾಗಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅನುಮೋದನೆ ಪಡೆದ ಫಲಾನುಭವಿಗಳಿಗೆ ಕರ್ನಾಟಕ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮನೆ ಹಂಚಿಕೆ ಪತ್ರ ನೀಡಲಿದ್ದಾರೆ. ಬಾಕಿ ಉಳಿದಿರುವ 465 ಮನೆಗಳನ್ನು ವಿತರಿಸುವ ಪ್ರಕ್ರಿಯೂ ಚಾಲನೆಯಲ್ಲಿದೆ ಎಂದು ಅವರು ಹೇಳಿದ್ದಾರೆ.
ಡಿಪಿಆರ್ ರೂಪಿಸುವಾಗ ಸೇರ್ಪಡೆಯಾಗಿದ್ದ ಫಲಾನುಭವಿಗಳು ಯಾರಾದರೂ ಕೈ ಬಿಟ್ಟು ಹೋಗಿದ್ದಲ್ಲಿ ಸೂಕ್ತ ದಾಖಲಾತಿಗಳೊಂದಿಗೆ ಮಹಾನಗರ ಪಾಲಿಕೆ ಕಚೇರಿಗೆ ಸಲ್ಲಿಸಬಹುದು ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.