ADVERTISEMENT

ನರೇಗಾ ಅವೈಜ್ಞಾನಿಕ: ಆರೋಪ

ಕುಪ್ಪೂರು ಗ್ರಾಮ ಪಂಚಾಯಿತಿ ಗ್ರಾಮಸಭೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 4:53 IST
Last Updated 21 ಜನವರಿ 2017, 4:53 IST
ನರೇಗಾ ಅವೈಜ್ಞಾನಿಕ: ಆರೋಪ
ನರೇಗಾ ಅವೈಜ್ಞಾನಿಕ: ಆರೋಪ   

ಚಿಕ್ಕನಾಯಕನಹಳ್ಳಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ನಡೆದಿರುವ ಕಾಮಗಾರಿಗಳು ಅವೈಜ್ಞಾನಿಕವಾಗಿವೆ ಎಂದು ತಾಲ್ಲೂಕಿನ ಕುಪ್ಪೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ನಡೆದ ನರೇಗಾ ಸಾಮಾಜಿಕ ಲೆಕ್ಕ ಪರಿಶೋಧನೆ ಗ್ರಾಮ ಸಭೆಯಲ್ಲಿ ಸಾರ್ವಜನಿಕರು ಆರೋಪಿದರು.

2016ರ ಏಪ್ರಿಲ್‌ನಲ್ಲಿ ನಡೆದ ಯೋಜನೆ ಕಾಮಗಾರಿಯಲ್ಲಿ  ಕೂಲಿ ನೀಡಿಲ್ಲ. ಸದಸ್ಯರ ಹಿಂಬಾಲಕರಿಗೆ ಮಾತ್ರ ಕೂಲಿ ಹಣ ನೀಡಿದ್ದಾರೆ. ರಸ್ತೆ ಪಕ್ಕದಲ್ಲಿ ನಿರ್ಮಿಸಿರುವ ತೊಟ್ಟಿಗಳಿಗೆ ನೀರು ತುಂಬಿಸಿಲ್ಲ, ಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿದೆ. ಕೊಳಚೆ ನೀರು ಶಾಲೆ ಆವರಣದಲ್ಲಿ ನಿಂತು ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ ಎಂದು ಗ್ರಾಮದ ಅಶೋಕ್ ದೂರಿದರು. ಮಹೇಶ್, ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದರು. 

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಟಿ.ಜಿ.ತಿಮ್ಮಯ್ಯ ಮಾತನಾಡಿ, ‘ಕುಪ್ಪೂರು ಪಂಚಾಯಿತಿ ಅಧ್ಯಕ್ಷರ ಮೇಲೆ ಪ್ರಕರಣ ದಾಖಲಾಗಿದ್ದರಿಂದ ನಾಪತ್ತೆಯಾಗಿದ್ದಾರೆ. ಅಧ್ಯಕ್ಷರನ್ನು ಹೊರತುಪಡಿಸಿ ಉಳಿದ ಸದಸ್ಯರು ಜನರ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಗ್ರಾಮ ಪಂಚಾಯಿತಿ ಅಧಿಕಾರವನ್ನು ತಾಲ್ಲೂಕು ಪಂಚಾಯಿತಿಗೆ ತರಲು ಕೋರಿಕೆ ಸಲ್ಲಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಂಜುಳಾ, ತಾ.ಪಂ.ಸದಸ್ಯ ಸಚಿನ್, ರೇಷ್ಮೆ ಇಲಾಖೆ ಅಧಿಕಾರಿ ಇಂದ್ರಾಣಿ, ಸದಸ್ಯರಾದ ಕಮಲಮ್ಮ, ಸುಜಾತ, ಶಿವಮ್ಮ ಇತರರು ಪಾಲ್ಗೊಂಡಿದ್ದರು.

ಗ್ರಾಮ ತೊರೆದ ಅಧ್ಯಕ್ಷ: ಗ್ರಾಮ ಪಂಚಾಯಿತಿ ಅಧ್ಯಕ್ಷ ಚಿಕ್ಕೇಗೌಡರ ವಿರುದ್ಧ ಚಿಕ್ಕನಾಯಕನಹಳ್ಳಿ  ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ಅಧ್ಯಕ್ಷರು ಕುಪ್ಪೂರು ಗ್ರಾಮ ಪಂಚಾಯಿತಿ ತೊರೆದು ಒಂದು ತಿಂಗಳಾಗಿದೆ. ಇದರಿಂದ ಗ್ರಾಮ ಪಂಚಾಯಿತಿ ಕಾರ್ಯ ಕಲಾಪ,  ಕುಡಿಯುವ ನೀರಿನ ವ್ಯವಸ್ಥೆ ಹಾಳಾಗಿದೆ ಎಂದು ಸಭೆಯಲ್ಲಿ ಗ್ರಾಮಸ್ಥರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.