ತುರುವೇಕೆರೆ: ತಾಲ್ಲೂಕಿನ ಹಲವು ಭಾಗಗಳಲ್ಲಿ ಬುಧವಾರ ರಾತ್ರಿ ಉತ್ತರೆ ಮಳೆ ಹದವಾಗಿ ಸುರಿದು ರೈತರ ಮುಖದಲ್ಲಿ ಸಂತಸ ಮೂಡಿಸಿದೆ. ತಾಲ್ಲೂಕಿನ ಎಲ್ಲ ಹೋಬಳಿಗಳಲ್ಲೂ ಉತ್ತಮ ಮಳೆಯಾಗಿದೆ. ಇದರಿಂದಾಗಿ ರೈತರು ನಿಟ್ಟುಸಿರು ಬಿಡುವಂತಾಗಿದೆ.
ರಾಗಿ, ಅವರೆ, ತೊಗರಿ, ಭತ್ತ, ಜೋಳ ಮುಂತಾದ ಬೆಳೆಗಳು ನಳನಳಿಸುವಂತೆ ಮಾಡಿದೆ. ಜತೆಗೆ ತೆಂಗು, ಅಡಿಕೆ ತೋಟಗಳಲ್ಲಿ ಅಲಲ್ಲಿ ಮಳೆಯ ನೀರು ಸಂಗ್ರಹವಾಗಿದೆ. ಇನ್ನೊಂದೆಡೆ ಮುಂಗಾರು ಬಿತ್ತನೆ ಮಾಡದ ರೈತರು ರಾಗಿ ಪೈರನ್ನು ನಾಟಿ ಮಾಡುತ್ತಿರುವುದು ಕಂಡು ಬಂದಿದೆ. ಪಟ್ಟಣದ ದಬ್ಬೇಘಟ್ಟ, ತಿಪಟೂರು, ಬಾಣಸಂದ್ರ ಮತ್ತು ಮಾಯಸಂದ್ರ ರಸ್ತೆಗಳ ಬದಿಯ ಚರಂಡಿಗಳಲ್ಲಿ ಮಳೆಯ ನೀರು ತುಂಬಿ ರಸ್ತೆಯ ಮೇಲೆ ಹರಿಯಿತು.
ಪಟ್ಟಣದ ತಗ್ಗಿನ ಪ್ರದೇಶದ ಮನೆಗಳಿಗೂ ನೀರು ನುಗ್ಗಿ ಜನರು ಪರದಾಡುವಂತೆ ಮಾಡಿತು. ಇಲ್ಲಿನ ಮಾಯಸಂದ್ರ ರಸ್ತೆಯ ಸಾರ್ವಜನಿಕ ಆಸ್ಪತ್ರೆಯ ಎದುರಿನ ರಸ್ತೆಯಲ್ಲಿ ಮಳೆಯ ನೀರು ಹರಿದು ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.
ಮಳೆಯಿಂದಾಗಿ ಕೊಟ್ಟರ ಕೊಟ್ಟಿಗೆ ಹಾಗೂ ದಂಡಿನಶಿವರ ಹೋಬಳಿಯ ಗಿರೇನಹಳ್ಳಿ ಸಮೀಪ ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ತುರುವೇಕೆರೆ ಪಟ್ಟಣದಲ್ಲಿ 60.3, ದಂಡಿನಶಿವರ 75, ಮಾಯಸಂದ್ರ 32.4, ದಬ್ಬೇಘಟ್ಟ 15.6, ಸಂಪಿಗೆ 44.4 ಮಿ.ಮೀ ಮಳೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.