ADVERTISEMENT

ಶಿರಾ ಜಿಲ್ಲೆ ರಚನೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 27 ಜುಲೈ 2017, 8:54 IST
Last Updated 27 ಜುಲೈ 2017, 8:54 IST

ಶಿರಾ: ‘ನಗರವನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡು ಶಿರಾ ಜಿಲ್ಲೆ ರಚನೆ ಮಾಡುವಂತೆ’ ಒತ್ತಾಯಿಸಿ ಮಂಗಳವಾರ ಶಿರಾ ಜಿಲ್ಲಾ ಹೋರಾಟ ಕ್ರಿಯಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ತುಮಕೂರು ಜಿಲ್ಲೆ 10 ತಾಲ್ಲೂಕುಗಳಿಂದ ಕೂಡಿದ್ದು ದೊಡ್ಡ ಜಿಲ್ಲೆಯಾಗಿರುವುದರಿಂದ ಆಡಳಿತ ನಿರ್ವಹಣೆ ಕಷ್ಟವಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ವಂದಿಸಲು ಕಷ್ಟವಾಗುತ್ತಿದೆ.

ಕಾರಣ ತುಮಕೂರು ಜಿಲ್ಲೆಯಲ್ಲಿ ಜನಸಂಖ್ಯೆ ಹಾಗೂ ಭೌಗೋಳಿಕ ವಿಸ್ತೀರ್ಣದಲ್ಲಿ ದೊಡ್ಡ ತಾಲ್ಲೂಕಾಗಿರುವ ನಗರವನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡು ಶಿರಾ, ಮಧುಗಿರಿ, ಪಾವಗಡ, ಚಿಕ್ಕನಾಯಕನಹಳ್ಳಿ ಹಾಗೂ ಪಕ್ಕದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕನ್ನು ಸೇರಿಸಿ ಶಿರಾ ಜಿಲ್ಲೆ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.

ADVERTISEMENT

ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಪ್ರವಾಸಿ ಮಂದಿರದ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಲಾಯಿತು. ನಂತರ ತಾಲ್ಲೂಕು ಕಚೇರಿ ತಲುಪಿ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಕಾಲೇಜಿನ ವಿದ್ಯಾರ್ಥಿಗಳು ಹೋರಾಟವನ್ನು ಬೆಂಬಲಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತಿಭಟನೆಯಲ್ಲಿ ಕರ್ನಾಟಕ ರೈತ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ನಾದೂರು ಕೆಂಚಪ್ಪ, ನಗರಸಭೆ ಸದಸ್ಯ ಅಂಜಿನಪ್ಪ, ಆರ್.ವಿ.ಪುಟ್ಟಕಾಮಣ್ಣ, ಡೈರಿ ಕುಮಾರ್, ಆಟೊ ಚಾಲಕರ ಸಂಘದ ಅಧ್ಯಕ್ಷ ಸಿದ್ದೇಶ್ವರ, ಧನಂಜಯಾರಾಧ್ಯ, ಚಂಗಾವರ ಸೋಮಣ್ಣ, ರಾಜಸಿಂಹ, ಮಹಮದ್ ಜಿಯಾವುಲ್ಲಾ, ಶಾಂತವೀರಯ್ಯ, ಶ್ರೀನಿವಾಸ್, ಶ್ರೀಧರ್, ರಘುರಾವ್, ರಮೇಶ್ ಪಡಿ, ಜಯರಾಮಯ್ಯ, ಲಿಂಗಪ್ಪ, ಲತಾಕೃಷ್ಣ, ರೇಣುಕಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.