ADVERTISEMENT

2 ವರ್ಷದ ಹಿಂದೆ ಹೂತ್ತಿದ್ದ ಶವ ಕಿತ್ತ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 19 ಮೇ 2017, 4:57 IST
Last Updated 19 ಮೇ 2017, 4:57 IST
ಉಪ್ಪು ಸುರಿದು ಅಹೋರಾತ್ರಿ ದಹನ ಕ್ರಿಯೆಯಲ್ಲಿ ತೊಡಗಿರುವ ಯುವಕರು
ಉಪ್ಪು ಸುರಿದು ಅಹೋರಾತ್ರಿ ದಹನ ಕ್ರಿಯೆಯಲ್ಲಿ ತೊಡಗಿರುವ ಯುವಕರು   

ಚಿಕ್ಕನಾಯಕನಹಳ್ಳಿ:  ಮೈ ಮೇಲೆ ತೊನ್ನು(ಬಿಳಿ ಕಲೆ) ಇರುವ ಶವವನ್ನು ಹೂತಿರುವುದರಿಂದ ಊರಿಗೆ ಮಳೆಯಾಗುತ್ತಿಲ್ಲ ಎಂಬ ಜ್ಯೋತಿಷರೊಬ್ಬರ ಮಾತಿಗೆ ಕಿವಿಗೊಟ್ಟು ತಾಲ್ಲೂಕಿನ ಅಣೆಕಟ್ಟೆಯ ಕೆಲವು ಯುವಕರು 2 ವರ್ಷಗಳ ಹಿಂದೆ ಹೂತಿದ್ದ ಶವದ ಅಸ್ತಿಯನ್ನು  ಹೊರತೆಗೆದು ಬುಧವಾರ ರಾತ್ರಿ ಸುಟ್ಟಿದ್ದಾರೆ.

ಈ ವಿಕೃತ ಕೃತ್ಯದ ವಿಡಿಯೊ ಸಹ ಮಾಡಿಕೊಂಡಿದ್ದಾರೆ. ಗ್ರಾಮದ ವ್ಯಕ್ತಿಯೊಬ್ಬರ ತಲೆ ಬುರುಡೆಯನ್ನು ಕೈಯಲ್ಲಿಡಿದುಕೊಂಡು ನಿಂತಿರುವುದು ದೃಶ್ಯದಲ್ಲಿ ಕಾಣುತ್ತದೆ.

ಈ ವಿಡಿಯೊ  1.8 ನಿಮಿಷ ಇದೆ. ಅಣೆಕಟ್ಟೆ ಬಾಯ್ಸ್ ಎಂಬ ವಾಟ್ಸ್ ಆ್ಯಪ್ ಗ್ರೂಪ್‌ನಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ. ಈ ಕೃತ್ಯಕ್ಕೆ ಪ್ರಜ್ಞಾವಂತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ADVERTISEMENT

ಊರಿನ ಗುಡಿಗೌಡರಾಗಿದ್ದ ಮಲ್ಲೇಗೌಡ ಅವರು 2 ವರ್ಷಗಳ ಹಿಂದೆ ನಿಧನರಾಗಿದ್ದರು. ಅವರ ಶವವನ್ನು  ಹೂಳಲಾಗಿತ್ತು.

‘ಇದರಿಂದ ತಾಲ್ಲೂಕಿಗೆ ಬರಗಾಲ ಬಂದಿದೆ. ಅವರ ಶವವನ್ನು ಹೊರತೆಗೆದು ಅಸ್ತಿಯನ್ನು ಉಪ್ಪು ಸುರಿದು ಸುಡಬೇಕು. ಬೆಂಕಿಯನ್ನು 72 ಗಂಟೆ ಉರಿಸಬೇಕು’ ಎಂದು ಜ್ಯೋತಿಷರೊಬ್ಬರು ಹೇಳಿದ್ದರು ಎನ್ನಲಾಗಿದೆ.

‘ಮಲೆನಾಡಿನಿಂದ ಪವಿತ್ರ ಜಲ ತಂದು ಕೆರೆಗೆ ಚೆಲ್ಲಿದರೆ ಮಳೆ ಬಂದು ಕೆರೆ ತುಂಬುತ್ತದೆಯಂತೆ. ಈ ರೀತಿ ತಿಮ್ಮನಹಳ್ಳಿ ಜನ ಮಾಡಿದ್ದರಿಂದ ಅಲ್ಲಿ ಮಳೆ ಬಂತಂತೆ. ಊರಿಗೆ ಒಳ್ಳೆಯದಾಗಲಿ ಎಂದು ‘ಉಪ್ಪು ದಹನ’ಕ್ಕೆ ಮುಂದಾಗಿದ್ದೇವೆ. ಯುವಕರ 6 ತಂಡಗಳನ್ನು ರಚಿಸಿಕೊಂಡು ಅಹೋರಾತ್ರಿ ಬೆಂಕಿ ಆರದಂತೆ ನೋಡಿಕೊಳ್ಳುತ್ತಿದ್ದೇವೆ. ಇಂದು(ಶುಕ್ರವಾರ) ಬೆಳಿಗ್ಗೆ ಪವಿತ್ರ ಜಲ ತರಲು ಕಿಗ್ಗಾ ಗ್ರಾಮಕ್ಕೆ ಹೋಗುತ್ತಿದ್ದೇವೆ’ ಎಂದು ಕೆಲ ಯುವಕರು ‘ಪ್ರಜಾವಾಣಿ‘ಗೆ ತಿಳಿಸಿದರು.

‘ಮಲ್ಲೇಗೌಡ ಕುಟುಂಬದವರು ಯಾರೂ ಊರಲ್ಲಿ ಇಲ್ಲ. ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ’ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.