ಮಂದಾರ್ತಿ(ಬ್ರಹ್ಮಾವರ ): ಗ್ರಾಮೀಣ ಪ್ರದೇಶದಲ್ಲಿ ಅದಷ್ಟೋ ಕಲಾವಿದರು ಸರ್ಕಾರದ ಅನೇಕ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದು, ಇಂತಹ ಮುಗ್ಧ ಅಶಕ್ತ ಜಾನಪದ ಕಲಾವಿದರಿಗೆ ಮಾಸಾಶನ ಸಿಗುವಂತಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಶನಿವಾರ ಮಂಗಳೂರು ಆಕಾಶವಾಣಿ ಪ್ರಾಯೋಜಿ ಸಿದ ಕುಂದಗನ್ನಡದ ಕೋಲು ಹೊಯ್ಯುವ ಪದಗಳು ಎಂಬ ವಿಷಯದ ಬಗ್ಗೆ ಎರಡು ದಿನಗಳ ದಾಖಲಾತಿ ಕಮ್ಮಟ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗತಿಸಿ ಹೋದ ಇತಿಹಾಸದ ಕಟ್ಟಕಡೆಯ ಪಳಿಯುಳಿಕೆಯಂತಿರುವ ಜಾನಪದ ಸಾಹಿತ್ಯಗಳ ದಾಖಲಾತಿ ಮಾಡಿ ಮುಂದಿನ ಪೀಳಿಗೆಗೆ ಉಳಿಸು ತ್ತಿರುವ ಆಕಾಶವಾಣಿಯ ಕಾರ್ಯಕ್ರಮ ಅಭಿನಂದನಾರ್ಹ ಎಂದ ಅವರು ಭಾವನೆಗಳನ್ನು, ಸಾಮರಸ್ಯದ ಬದುಕನ್ನು ಭಾಷೆಯ ಮೂಲಕ ತಿಳಿಸವಂತೆ ಮಾಡುವ ಇಂತಹ ಮುಗ್ಧ ಕಲಾವಿದರು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದರು.
ಚರಿತ್ರೆ ಮತ್ತು ಚಾರಿತ್ರ್ಯದ ಬಗ್ಗೆ ಉಪನ್ಯಾಸ ನೀಡಿದ ಮಂಗಳೂರು ವಿವಿ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಉದಯ ಬಾರ್ಕೂರು, ಯುವ ಜನಾಂಗ ಜಾನಪದ ಇತಿಹಾಸ ತಿಳಿಸುವ ಸಂಸ್ಕಾರಯುತ ಬದುಕನ್ನು ಕಟ್ಟುವ ಇಂತಹ ಜಾನಪದ ಸಾಹಿತ್ಯವನ್ನು ಉಳಿಸಿ ಬೆಳೆಸಬೇಕು ಎಂದರು. ಮಂಗಳೂರು ಆಕಾಶವಾಣಿಯ ಮುಖ್ಯಸ್ಥ ಡಾ.ವಸಂತಕುಮಾರ ಪೆರ್ಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಂದಾರ್ತಿ ದುರ್ಗಾಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಚ್.ಧನಂಜಯ ಶೆಟ್ಟಿ, ಸದಸ್ಯ ಗೋಪಾಲ ನಾಯ್ಕ ಇದ್ದರು. ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಡಾ.ಸದಾ ನಂದ ಪೆರ್ಲ ಸ್ವಾಗತಿಸಿದರು. ದೇವು ಹನೆಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಡಾ.ಸದಾನಂದ ಹೊಳ್ಳ, ಕೆ.ಅಶೋಕ್, ಸುಧೀಶ್ ನಾಯರ್ ಸಹಕರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.