ಬೈಂದೂರು: ತ್ರಾಸಿ ಮಹಿಷಮರ್ದಿನಿ ಫ್ರೆಂಡ್ಸ್ ವತಿಯಿಂದ ಅಸ್ವಸ್ಥರ ಚಿಕಿತ್ಸೆಗೆ ನೆರವು ವಿತರಿಸುವ ಕಾರ್ಯಕ್ರಮ ಮಂಗಳವಾರ ನಡೆಯಿತು.
ಸಂಸ್ಥೆಯು ತ್ರಾಸಿ ಬೈಪಾಸ್ನಲ್ಲಿ ಆಯೋಜಿಸಿದ್ದದ ಪೆರ್ಡೂರು ಮೇಳದ ಯಕ್ಷಗಾನ ಪ್ರದರ್ಶನದ ವೇದಿಕೆಯಲ್ಲಿ ಸಹಾಯಧನ ವಿತರಿಸಿ ಮಾತನಾಡಿದ ಬಗ್ವಾಡಿ ಹೋಬಳಿ ಮೊಗವೀರ ಮಹಾಜನ ಸಂಘದ ಕುಂದಾಪುರ ಶಾಖೆ ಅಧ್ಯಕ್ಷ ಕೆ.ಕೆ ಕಾಂಚನ್ ಅವರು, ರಾಜು ಮೆಂಡನ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಕಾರ್ಯ ಶ್ಲಾಘನೀಯ. ಮಹಿಷಮರ್ದಿನಿ ಫ್ರೆಂಡ್ಸ್ನವರು ನಿರಂತರವಾಗಿ ಇಂಥಹ ಮಾನವೀಯ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಯಕ್ಷಗಾನ ಕಾರ್ಯಕ್ರಮ ಆಯೋಜನೆಯಿಂದ ಉಳಿಕೆಯಾದ ಹಾಗೂ ದಾನಿಗಳಿಂದ ಸಂಗ್ರಹವಾದ ಹಣವನ್ನು ವೈದ್ಯಕೀಯ ಸಹಾಯವಾಗಿ ಬಡವರಿಗೆ ನೀಡುತ್ತಿರುವುದು ಉತ್ತಮ ಕಾರ್ಯ ಎಂದರು.
ಈ ಸಂದರ್ಭ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ರಿತೇಶ್ ಖಾರ್ವಿ ಅವರಿಗೆ ₹1.1 ಲಕ್ಷ, ರಾಘವೇಂದ್ರ ಪೂಜಾರಿ ಅವರ ಬಾಯಿ ಶಸ್ತ್ರ ಚಿಕಿತ್ಸೆಗಾಗಿ ₹ 40 ಸಾವಿರ, ಲಚ್ಚು ಮೊಗವೀರ ಅವರ ಕೃತಕ ಕಾಲು ಜೋಡಣೆಗಾಗಿ ₹ 15 ಸಾವಿರ ಹಸ್ತಾಂತರ ಮಾಡಲಾಯಿತು.
ಹಿರಿಯ ಮೊಗವೀರ ಮುಖಂಡರಾದ ಮಂಜು ನಾಯ್ಕ ತ್ರಾಸಿ, ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷ ರಾಜು ಶ್ರೀಯಾನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್, ಶೀನ ದೇವಾಡಿಗ, ಸಂಸ್ಥೆಯ ಅಧ್ಯಕ್ಷ ರಾಜು ಮೆಂಡನ್ ತ್ರಾಸಿ, ವಾಸು ಪುತ್ರನ್ ಇದ್ದರು. ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ಮಾಜಿ ಅಧ್ಯಕ್ಷ ವಾಸು ಜಿ. ವಂಡ್ಸೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಂತರ ಪೆರ್ಡೂರು ಮೇಳದವರಿಂದ ’ಆಹಂ ಬ್ರಹ್ಮಾಸ್ಮಿ’ ಯಕ್ಷಗಾನ ಪ್ರದರ್ಶನ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.