ಉಡುಪಿ: ಜಿಲ್ಲೆ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಯುವ ಮನಸ್ಸುಗಳ ಸಲಹೆ ಕೇಳಲು ‘ಗ್ರ್ಯಾಂಡ್ ಚಾಲೆಂಜ್ ಉಡುಪಿ’ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಣಿಪಾಲ ವಿಶ್ವವಿದ್ಯಾಲಯದ ಇನ್ನೋವೇಶನ್ ಕೇಂದ್ರದ ಸಹಯೋಗದೊಂದಿಗೆ ಸ್ಪರ್ಧೆ ಆಯೋಜಿಸಲಾಗಿದೆ. ಕುಡಿಯುವ ನೀರಿನ ಮೂಲಗಳು, ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಿಕ್ಷಣ, ಘನತ್ಯಾಜ್ಯ ನಿರ್ವಹಣೆ, ವಲಸೆ ಕಾರ್ಮಿಕರು ಹಾಗೂ ಮಹಿಳಾ ಆರೋಗ್ಯ ಎಂಬ ಐದು ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಪದವಿ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಸಲಹೆ– ಚಿಂತನೆಯನ್ನು ಮುಂದಿಡಬಹುದು ಎಂದರು.
ವಿದ್ಯಾರ್ಥಿಗಳ ಪ್ರಸ್ತಾವನೆಯನ್ನು ಮೊದಲು ಮೌಲ್ಯಮಾಪನ ಮಾಡಿ ಅದರಲ್ಲಿ ಕೆಲವನ್ನು ಆಯ್ಕೆ ಮಾಡಿ ವಿಸ್ತೃತ ಹಾಗೂ ಪ್ರಾಯೋಗಿಕವಾಗಿ ಪ್ರಸ್ತುತಪಡಿಸಲು ಅವಕಾಶ ನೀಡಲಾಗುತ್ತದೆ. ಅದರಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಸಹ ಇದೆ. ಒಟ್ಟು ₹50 ಸಾವಿರ ಮೊತ್ತದ ಬಹುಮಾನ ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಸಲಹೆಗಳು ಪ್ರಾಯೋಗಿಕವಾಗಿ ಜಾರಿಗೊಳಿಸುವಂತಿರಬೇಕು ಎಂದರು.
ಕುಂದಾಪುರ ಉಪ ವಿಭಾಗಾಧಿಕಾರಿ ಶಿಲ್ಪಾ ನಾಗ್, ಇನ್ನೋವೇಶನ್ ಕೇಂದ್ರದ ಅರುಣ್ ಶಾನುಭಾಗ್ ಇದ್ದರು. ಸ್ಪರ್ಧೆಯ ಬಗ್ಗೆ ಹೆಚ್ಚಿನ ಮಾಹಿತಿಗೆ www.grandchallengeudupi.com ವೆಬ್ಸೈಟ್ ನೋಡಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.