ಉಡುಪಿ: ರಾಷ್ಟ್ರೀಯ ಸೇವಾ ಯೋಜನೆಯ (ಎನ್ಎಸ್ಎಸ್) ಸ್ವಯಂ ಸೇವಕರ ಸಂಖ್ಯೆಯನ್ನು 10 ಲಕ್ಷಕ್ಕೆ ಏರಿಸುವ ಗುರಿ ಇದೆ ಎಂದು ಕ್ರೀಡಾ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.ಪೂರ್ಣಪ್ರಜ್ಞ ಕಾಲೇಜಿನ ಮಿನಿ ಸಭಾಂಗಣದಲ್ಲಿ ನಡೆದ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಎನ್ಎಸ್ಎಸ್ ಘಟಕದ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಈ ಮೊದಲು ಸ್ವಯಂ ಸೇವಕರ ಸಂಖ್ಯೆ 3.50 ಲಕ್ಷ ಇತ್ತು, ಈಗ ಅದು 4.75 ಲಕ್ಷಕ್ಕೆ ಏರಿಕೆಯಾಗಿದೆ. ಹಂತ ಹಂತವಾಗಿ ಇದನ್ನು 10 ಲಕ್ಷಕ್ಕೆ ಏರಿಸಲಾಗುವುದು. ಎನ್ಎಸ್ಎಸ್ ಚಟುವಟಿಕೆಗಳಿಗಾಗಿಯೇ ಈ ಬಾರಿ ಬಜೆಟ್ನಲ್ಲಿ ₹13 ಕೋಟಿಯನ್ನು ರಾಜ್ಯ ಸರ್ಕಾರ ಮೀಸಲಿಟ್ಟಿದ್ದು, ಉತ್ತಮ ಕಾರ್ಯಕ್ರಮ ಆಯೋಜಿಸಲು ಇದರಿಂದ ಸಾಧ್ಯವಾಗಲಿದೆ ಎಂದರು.
‘ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯ ಅನಾವರಣಕ್ಕೆ ಎನ್ಎಸ್ಎಸ್ ಸೂಕ್ತ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಎನ್ಎಸ್ಎಸ್ಗೆ ಸೇರುವ ಮೂಲಕ ಅದರ ಪ್ರಯೋಜನಾ ಪಡೆದುಕೊಳ್ಳ ಬೇಕು. ಪ್ರತಿಭೆ ಪೋಷಣೆ ಮಾಡದಿದ್ದರೆ ಅದು ಕಮರಿ ಹೋಗುತ್ತದೆ. ಪ್ರತಿಭೆ ಯನ್ನು ಪ್ರೋತ್ಸಾಹಿಸುವ ಕೆಲಸವನ್ನು ಎನ್ಎಸ್ಎಸ್ ಮಾಡುತ್ತಿದೆ’ ಎಂದು ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ಹೇಳಿದರು.
‘ಯಾರ ಮೇಲೆಯೂ ಅವಲಂಬಿತ ರಾಗದೆ ಸ್ವಾವಲಂಬಿಗಳಾಗಿ ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವುದು ತಪಸ್ಸಿದ್ದಂತೆ. ಈ ರೀತಿ ಜೀವನ ನಡೆಸುವ ಮೂಲಕ ಯಶಸ್ಸು ಗಳಿಸಬಹುದು’ ಎಂದು ಅವರು ಹೇಳಿದರು.
ರಾಜ್ಯ ಎನ್ಎಸ್ಎಸ್ ಯೋಜನಾಧಿ ಕಾರಿ ಡಾ. ಗಣನಾಥ ಶೆಟ್ಟಿ ಎಕ್ಕಾರು, ನಿವೃತ್ತ ಮುಖ್ಯೋಪಾಧ್ಯಾಯ ಆರೂರು ತಿಮ್ಮಪ್ಪ ಶೆಟ್ಟಿ, ಎಸ್.ಪಿ.ಇ.ಸಿ. ಆಡಳಿತ ಮಂಡಳಿ ಕಾರ್ಯದರ್ಶಿ ಪ್ರದೀಪ್ ಕುಮಾರ್, ಪ್ರಾಂಶುಪಾಲೆ ಡಾ. ಸುಕನ್ಯಾ ಮೇರಿ, ಸಂಯೋಜನಾಕಾರಿಗಳಾದ ರಮಾನಂದ ರಾವ್, ಮಲ್ಲಿಕಾ, ವಿದ್ಯಾರ್ಥಿ ಮುಖಂಡರಾದ ರಕ್ಷಿತಾ ಜೋಗಿ, ಶ್ರೀಹರಿ ಭಟ್, ಮೇಘಶ್ರೀ, ಸ್ವಸ್ತಿಕಾ ಶೆಟ್ಟಿ ಉಪಸ್ಥಿತರಿದ್ದರು. ಚಿನ್ಮಯ್ ಕಶ್ಯಪ್ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.