ಉಡುಪಿ: ಉಡುಪಿಯ ಆರ್ಟಿಸ್ಟ್ ಫೋರಂ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಣೆಬೆನ್ನೂರಿನ ಕಲಾವಿದ ಶಿವ ಹಾದಿಮನಿ ಅವರ ಡೈಮಂಡ್ ಸ್ಟ್ರೋಕ್ ಕಲಾಕೃತಿಗಳ ಪ್ರದರ್ಶನ ಕಾರ್ಯಕ್ರಮಕ್ಕೆ ನಗರದ ದೃಷ್ಟಿ ಆರ್ಟ್ ಗ್ಯಾಲರಿಯಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.
ಅಂತರರಾಷ್ಟ್ರೀಯ ಫ್ಯಾಶನ್ ಡಿಸೈನರ್ ಆಗಿರುವ ಮಿಲಾನಿ ಗ್ಯಾರಿಯಾನ್ಡೊ ಕಲಾ ಪ್ರದರ್ಶನಕ್ಕೆ ಚಾಲನೆ ನೀಡಿದರು.
ಶಿರಸಿಯ ಜಿಎಫ್ಜಿಸಿಯ ಉಪ ಪ್ರಾಂಶುಪಾಲೆ ಡಾ. ಆಶಾ ಸಿ. ಇಂಗಲಗಿ ಮಾತನಾಡಿ, ಕಲಾ ಸಾಧನೆಗೆ ಪರಿಶ್ರಮ ಅಗತ್ಯವಾಗಿದ್ದು, ಆ ನಿಟ್ಟಿನಲ್ಲಿ ಕಲಾವಿದರು ಕಾರ್ಯೋನ್ಮುಖರಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಕಲಾವಿದ ರಮೇಶ್ ರಾವ್, ಕಲಾ ಕ್ಷೇತ್ರವೂ ಇತ್ತೀಚಿನ ದಿನಗಳಲ್ಲಿ ಕಲಾ ವಿಮರ್ಶಕರ ಕೊರತೆ ಎದುರಿಸುತ್ತಿದೆ. ಇದನ್ನು ನೀಗಿಸುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು.
ಕಲಾವಿದ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.
ಡೈಮಂಡ್ಸ್ ಸ್ಟ್ರೋಕ್ ಶೈಲಿಯಲ್ಲಿ ಮೂಡಿಬಂದಂತಹ ಕಥಕ್ಕಳಿ, ಗುಡ್ಡಗಾಡು ಮಹಿಳೆ, ರಾಧಾ ಕೃಷ್ಣ, ಮೀನುಗಾರ ಮಹಿಳೆ, ಹುಚ್ಚು ಮನಸ್ಸಿನ ಕುದುರೆ, ಪಾರ್ಥಸಾರಥಿ, ಶಿವ ನೃತ್ಯ ಮೊದಲಾದ ಬಣ್ಣದ ಬೆಳಕಿನ ಸಂಯೋಜನೆಯ ಕಲಾಕೃತಿಗಳು ಸಾರ್ವಜನಿಕರನ್ನು ಆಕರ್ಷಿಸುವಂತಿದೆ. ಕಲಾ ಪ್ರದರ್ಶನವು ಇದೇ 21ರ ವರೆಗೆ ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 7ರ ವರೆಗೆ ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ.
ಆರ್ಟಿಸ್ಟ್ ಫೋರಂನ ಕಾರ್ಯದರ್ಶಿ ಸಕು ಪಾಂಗಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ಬೀಡು ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.