ಉಡುಪಿ: ‘ಧರ್ಮ ಸಂಸತ್ ಅಧಿವೇಶನದಿಂದ ರಾಷ್ಟ್ರ ಹಾಗೂ ರಾಜ್ಯದಲ್ಲಿ ಹೊಸ ಹಿಂದೂ ಅಲೆ ಸೃಷ್ಟಿಯಾಗಬೇಕು’ ಎಂದು ಪರ್ಯಾಯ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.ನ. 24ರಿಂದ 26 ವರೆಗೆ ನಡೆಯಲಿರುವ ಧರ್ಮ ಸಂಸತ್ ಅಧಿವೇಶನಕ್ಕೆ ಪೂರ್ವಭಾವಿಯಾಗಿ ರಾಯಲ್ ಗಾರ್ಡನ್ನಲ್ಲಿ ಶುಕ್ರವಾರ ಆಯೋಜಿಸಿದ್ದ ಚಪ್ಪರ ಮುಹೂರ್ತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಆನೇಕ ಪ್ರಾಂತ್ಯದ ಸಂತರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಅಯೋಧ್ಯೆ ರಾಮ ಮಂದಿರ ಹಾಗೂ ಇತರ ವಿಷಯಗಳ ಬಗ್ಗೆ ಮಹತ್ವದ ನಿರ್ಣಯ ತೆಗೆದುಕೊಳ್ಳಲಾಗುವುದು. ಹಿಂದೂ ಧರ್ಮದ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಈ ಅಧಿವೇಶನ ಸಹಾಯ ಮಾಡಲಿದೆ’ ಎಂದು ಅವರು ಹೇಳಿದರು.
ಕೆರಂಜಿ ಮಠದ ಮುಕ್ತಾನಂದ ಸ್ವಾಮೀಜಿ ಮಾತನಾಡಿ, ‘ಪ್ರಸುತ್ತ ಹಿಂದು ಸಮಾಜದ ಮಠ ಮಂದಿರಗಳ ಮೇಲೆ ನಡೆದ ಅಕ್ರಮಗಳಿಗೆ ದಿಟ್ಟ ಹಾಗೂ ನೇರ ಉತ್ತರ ನೀಡುಲು ಧರ್ಮ ಸಂಸತ್ ಅಧಿವೇಶನ ಸಜ್ಜಾಗುತ್ತಿದೆ. ಕೇಸರಿ ಶಾಲು ಧರಿಸುವ ಸಂಘ ಪರಿವಾರದವರಿಗೆ ಭಯೋತ್ಪಾದರು ಎನ್ನುವ ಹಣೆ ಪಟ್ಟಿ ಕಟ್ಟಲಾಗುತ್ತಿದೆ.
ಜವಾಬ್ದಾರಿಯುತ ಸ್ಥಾನದಲ್ಲಿರುವ ಸರ್ಕಾರ ಹಿಂದೂಗಳ ದಮನಕ್ಕೆ ವ್ಯವಸ್ಥಿತ ಷಡ್ಯಂತ್ರ ರೂಪಿಸುವ ಕಾಲಘಟದಲ್ಲಿ, ಒಗ್ಗಟ್ಟಾಗಿ ಸರ್ಕಾರ ಬದಲಾಯಿಸುವ ದೊಡ್ಡ ಜವಾಬ್ದಾರಿ ಹಿಂದೂಗಳ ಮೇಲಿದೆ’ ಎಂದು ಹೇಳಿದರು.
‘ಹಿಂದೂ ಧರ್ಮ ವಿಶ್ವದಲ್ಲಿ ರಾರಾಜಿಸುವಂತೆ ಮಾಡಲು ಸಂತರು, ಸಂಘಟನೆ ಮತ್ತು ಸಮಾಜ ಒಂದಾಗಬೇಕಾಗಿದೆ. ಉಡುಪಿಯಲ್ಲಿ ನಡೆಯುತ್ತಿರುವ ಧರ್ಮ ಸಂಸತ್ ಮೂಲ ಉದ್ದೇಶ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಗೋಹತ್ಯೆ ಸಂಪೂರ್ಣ ನಿಷೇಧದ ಜತೆಗೆ ಹಿಂದೂ ಸಂಘಟನೆಗಳು ನಿರ್ಭಯತೆಯಿಂದ ಧಾರ್ಮಿಕ ಕಾರ್ಯವನ್ನು ಮಾಡಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ರೂಪಿಸುವುದಾಗಿದೆ’ ಎಂದರು.
ಸಂಘದ ಸಂಚಾಲಕ ಸುಬ್ರಮಣ್ಯ ಹೊಳ್ಳ, ಪ್ರಾಂತೀಯ ಅಧ್ಯಕ್ಷ ಎಂ.ಬಿ. ಪುರಾಣಿಕ್, ವಿಶ್ವ ಹಿಂದೂ ಪರಿಷತ್ನ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್, ಸೋಮಶೇಖರ್ ಭಟ್, ಗೌತಮ್ ಅಗರ್ವಾಲ್ ಉಪಸ್ಥಿತರಿದ್ದರು. ಪ್ರೇಮಾನಂದ ಸ್ವಾಗತಿಸಿದರು, ಭಾಗ್ಯಶ್ರೀ ಐತಾಳ್ ಕಾರ್ಯಕ್ರಮ ನಿರೂಪಿಸಿದರು, ಅಚ್ಯುತ್ ಕಲ್ಮಾಡಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.