ADVERTISEMENT

ಬಾಳೆಗಿಡ ನೆಟ್ಟು ಪ್ರತಿಭಟನೆ: ರಸ್ತೆ ದುರಸ್ತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 8:24 IST
Last Updated 18 ಜುಲೈ 2017, 8:24 IST

ಕೋಟ(ಬ್ರಹ್ಮಾವರ) : ಕೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಿಳಿಯಾರು ಬೇಳೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ದೊಡ್ಡ ಹೊಂಡಗಳು ಉಂಟಾಗಿದ್ದು, ಈ ಹೊಂಡಗಳನ್ನು ಮುಚ್ಚುವ ಬಗ್ಗೆ ಜನಪ್ರತಿನಿಧಿಗಳು ಅಧಿಕಾರಿಗಳು ಗಮನಹರಿಸದೇ ಇರುವುದನ್ನು ವಿರೋಧಿಸಿ ಗಿಳಿಯಾರು ಗ್ರಾಮಸ್ಥರು ರಸ್ತೆ ಹೊಂಡಗಳಲ್ಲಿ ಬಾಳೆಗಿಡ ನೆಟ್ಟು ಭಾನುವಾರ ವಿನೂತನ ಪ್ರತಿಭಟನೆ ನಡೆಸಿದರು.

ಕೋಟದಿಂದ ಬೇಳೂರಿಗೆ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು, ವಾಹನ ಸಂಚಾರ ದುಸ್ತರವಾಗಿದೆ. ಸಮಸ್ಯೆ ಕುರಿತು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯ ರಾಘವೇಂದ್ರ ಕಾಂಚನ್ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದ್ದರೂ ಈವರೆಗೆ ದುರಸ್ತಿ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ತ್ರಿಶೂಲ್ ಬಳಗದ ಅಶೋಕ್ ಶೆಟ್ಟಿ ಮಾತನಾಡಿ, ‘ರಸ್ತೆಯ ಬಗ್ಗೆ ಸಾಕಷ್ಟು ಬಾರಿ ಲಿಖಿತವಾಗಿ ಮತ್ತು ಮೌಖಿಕವಾಗಿ ಮನವಿಯನ್ನು ಮಾಡಿದ್ದೇವೆ. ಆದರೆ ಇಲ್ಲಿಯವರೆಗೂ ಯಾರೂ ಕೂಡ ಈ ಬಗ್ಗೆ ಗಮನಹರಿಸಿಲ್ಲ.

ADVERTISEMENT

ಇವತ್ತು ಪ್ರತಿಭಟನೆ ಮೂಲಕ ಜನಪ್ರತಿನಿಧಿಗಳನ್ನು ಎಚ್ಚರಿಸುವ ಕೆಲಸವನ್ನ ಮಾಡುತ್ತಿದ್ದೇವೆ. ಕರಸೇವೆ ಮೂಲಕ ಈ ರಸ್ತೆಯನ್ನ ದುರಸ್ತಿ ಮಾಡಿ ಜನಪ್ರತಿನಧಿಗಳ ಗಮನ ಹರಿಸುತ್ತೇವೆ. ರಸ್ತೆ ದುರಸ್ತಿಗೆ ತಾತ್ಕಾಲಿಕ ವ್ಯವಸ್ಥೆಯನ್ನಾದರೂ ಮಾಡಬೇಕು’ ಎಂದು ಆಗ್ರಹಿಸಿದರು.

ಸಾಮಾಜಿಕ ಹೋರಾಟಗಾರ ಗಿರೀಶ್ ನಾಯಕ್, ವಿಜಯ್ ಶೆಟ್ಟಿ, ಅರುಣ್ ಶೆಟ್ಟಿ ಪಡುಮನೆ, ಕಿರಣ್ ಆಚಾರ್ಯ, ವಿನಯ್ ಪುತ್ರನ್, ಶಶಿಧರ್, ಸಂದೇಶ್ ಮನಿಷ್, ವಿಕಾಸ್ ಶರತ್ ಆಚಾರ್ಯ, ವಸಂತ್ ಗಿಳಿಯಾರ್ ಮತ್ತು ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.