ಉಡುಪಿ: ಮೋಡಬಿತ್ತನೆ ಕಾರ್ಯವನ್ನು ಮಾಡಬಹುದಾದ ‘ಡ್ರೋನ್ ಮೋಡಬಿತ್ತನೆ ತಂತ್ರಜ್ಞಾನ’ದ ಪ್ರಾಯೋಗಿಕ ಪರೀಕ್ಷಾರ್ಥ ಹಾರಾಟವು ಇದೇ 19ರಂದು ಸಂಜೆ 5.30ಕ್ಕೆ ಉಡುಪಿ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ತಂತ್ರಜ್ಞಾನದ ರೂವಾರಿ ರತ್ನಾಕರ ನಾಯ್ಕ್ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಸಚಿವ ಪ್ರಮೋದ್ ಮಧ್ವರಾಜ್ ಪ್ರಾಯೋಗಿಕ ಪರೀಕ್ಷಾರ್ಥ ಹಾರಾಟಕ್ಕೆ ಚಾಲನೆ ನೀಡುವರು. ಈ ತಂತ್ರಜ್ಞಾನವು ಪರಿಸರ ಸ್ನೇಹಿಯಾಗಿದ್ದು, ಸ್ವಯಂ ನಿರ್ವಹಣೆ ಯನ್ನು ಹೊಂದಿದೆ. ಯಾವುದೇ ಚಾಲ ಕರ, ವಿಮಾನಗಳ ಅವಶ್ಯಕತೆ ಇರುವು ದಿಲ್ಲ. ಇದರ ನಿರ್ವಹಣಾ ವೆಚ್ಚವು ಕಡಿಮೆಯಾಗಿದ್ದು, ಹೆಚ್ಚು ಪ್ರಯೋಜನ ಕಾರಿಯಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಇದನ್ನು ಸಂಪೂರ್ಣವಾಗಿ ಕಾರ್ಯರೂಪಕ್ಕೆ ತರಲು ಸರ್ಕಾರದ ಸಹಕಾರ ಮತ್ತು ಅನುಮತಿ ಅಗತ್ಯವಿದ್ದು, ಅದಕ್ಕಾಗಿ ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಬಳಕೆಯಲ್ಲಿರುವ ಮೋಡ ಬಿತ್ತನೆ ತಂತ್ರಜ್ಞಾನದ ನಿರ್ವಹಣಾ ವೆಚ್ಚ ಅತ್ಯಂತ ದುಬಾರಿಯಾಗಿದ್ದು, ಇಬ್ಬರು ಚಾಲಕರೊಂದಿಗೆ ನಿರ್ವಹಣಾ ಎಂಜಿನಿ ಯರ್ ಹಾಗೂ ದೊಡ್ಡ ಗಾತ್ರದ ವಿಮಾನದ ಅಗತ್ಯವಿದೆ. ಅಲ್ಲದೆ, ಇದಕ್ಕೆ ವಿದೇಶಿ ಕಂಪೆನಿಗಳನ್ನು ಅವಲಂಬಿ ಸಬೇಕಾಗಿದೆ. ಆದ್ದರಿಂದ ಡ್ರೋನ್ ಮೋಡಬಿತ್ತನೆ ತಂತ್ರಜ್ಞಾನ ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬಂದಲ್ಲಿ ವೆಚ್ಚವು ಕಡಿಮೆಯಾಗಲಿದ್ದು, ತುಂಬಾ ಪ್ರಯೋಜನಕಾರಿಯಾಗಲಿದೆ. ಮಳೆಯಾಗುವ ಮೋಡಗಳನ್ನು ಗುರು ತಿಸಿ ಈ ತಂತ್ರಜ್ಞಾನವನ್ನು ಬಳಸಿ ಕೊಂಡು ಮೋಡಬಿತ್ತನೆ ಮಾಡಿದಲ್ಲಿ ಸುಮಾರು 10 ಕಿ.ಮೀ ವ್ಯಾಪ್ತಿಯವರೆಗೆ ಮಳೆ ಆಗುವ ಸಾಧ್ಯತೆಗಳಿವೆ ಎಂದರು.
ಇಸ್ರೋದ ನಿವೃತ್ತ ವಿಜ್ಞಾನಿ ಜನಾರ್ದನ ರಾವ್, ಎಂಜಿನಿಯರ್ ಪ್ರಜ್ವಲ್ ಹೆಗ್ಡೆ, ದಿವಾಕರ ಭಟ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.